ADVERTISEMENT

ಪೊಲೀಸರ ಸೋಗಿನಲ್ಲಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 20:54 IST
Last Updated 15 ನವೆಂಬರ್ 2020, 20:54 IST

ಬೆಂಗಳೂರು:ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿರುವ ಆಭರಣ ಮಳಿಗೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿದ್ದ ದುಷ್ಕರ್ಮಿಗಳು, ಚಿನ್ನಾಭರಣ ಸುಲಿಗೆ ಮಾಡಿದ್ದಾರೆ.

‘ನಗರ್ತಪೇಟೆಯಲ್ಲಿರುವ ಗೀತಾ ಜ್ಯುವೆಲರ್ಸ್ ಮಳಿಗೆ ಮಾಲೀಕ ಕಾರ್ತಿಕ್ ಎಂಬುವರು ದೂರು ನೀಡಿದ್ದಾರೆ. ಕೃತ್ಯ ಎಸಗಿದ್ದ ಆರೋಪದಡಿ, ನಾಗಮಂಗಲದ ನಿವಾಸಿಗಳು ಎನ್ನಲಾದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ನ. 11ರ ತಡರಾತ್ರಿ ಪೊಲೀಸ್ ಸಮವಸ್ತ್ರದಲ್ಲಿ ಮಳಿಗೆಗೆ ಹೋಗಿದ್ದ ಆರೋಪಿಗಳು, ‘ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಮಳಿಗೆ ತಪಾಸಣೆ ಮಾಡಲು ಬಂದಿದ್ದೇವೆ’ ಎಂದಿದ್ದರು. ಸಿಬ್ಬಂದಿಯನ್ನು ಬೆದರಿಸಿ ಮಾಲೀಕ ಕಾರ್ತಿಕ್ ಅವರಿಗೂ ಕರೆ ಮಾಡಿದ್ದರು. ಮಳಿಗೆಯಲ್ಲಿದ್ದ ಸುಮಾರು 300 ಗ್ರಾಂ ಚಿನ್ನಾಭರಣವನ್ನು ಚೀಲದಲ್ಲಿ ಕಟ್ಟಿಕೊಂಡಿದ್ದ ಆರೋಪಿಗಳು, ‘ಪೊಲೀಸ್ ಠಾಣೆಗೆ ಬಂದು ಆಭರಣ ಬಿಡಿಸಿಕೊಂಡು ಹೋಗಿ’ ಎಂದು ಹೊರಟು ಹೋಗಿದ್ದರು.’

ADVERTISEMENT

‘ಮಳಿಗೆ ಮಾಲೀಕರು ಠಾಣೆಗೆ ಬಂದು ವಿಚಾರಿಸಿದ್ದರು. ಮಳಿಗೆಗೆ ಬಂದವರು ನಕಲಿ ಪೊಲೀಸರು ಎಂಬುದು ಅವಾಗಲೇ ಗೊತ್ತಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು. ಮಳಿಗೆಗೆ ಬರುವಾಗ ಆರೋಪಿಗಳು ಕಾರಿನಲ್ಲಿ ಬಂದಿದ್ದರು. ಅದರ ನೋಂದಣಿ ಸಂಖ್ಯೆ ಆಧರಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.