ADVERTISEMENT

ಮುತ್ತೂಟ್ ಫೈನಾನ್ಸ್‌ನಿಂದ ಕಳವು ಪ್ರಕರಣ: 8.6 ಕೆ.ಜಿ ಚಿನ್ನ ಜಪ್ತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 22:29 IST
Last Updated 1 ಜನವರಿ 2020, 22:29 IST
ಪುಲಿಕೇಶಿನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ
ಪುಲಿಕೇಶಿನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಕಚೇರಿ   

ಬೆಂಗಳೂರು: ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿರುವ ಮುತ್ತೂಟ್ ಫೈನಾನ್ಸ್‌ ಕಚೇರಿಯಿಂದ ಡಿ. 22ರಂದು ರಾತ್ರಿ ₹ 16 ಕೋಟಿ ಮೌಲ್ಯದ 70 ಕೆ.ಜಿ ಚಿನ್ನಾಭರಣ ದೋಚಿದ ಪ್ರಕರಣವನ್ನು ಭೇದಿಸಿರುವ ಪೂರ್ವ ವಿಭಾಗದ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.

ನೇಪಾಳ ಮತ್ತು ಬಿಹಾರ ಸೆಕ್ಯೂರಿಟಿ ಗ್ಯಾಂಗ್ ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ವಿಶೇಷ ತನಿಖಾ ತಂಡ, ಆರೋಪಿಗಳ ಪತ್ತೆಗೆ ನೇಪಾಳಕ್ಕೆ ತೆರಳಿತ್ತು. ಈ ತಂಡ ನಾಲ್ವರನ್ನು ವಶಕ್ಕೆ ಪಡೆದು, 8.6 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದೆ.

ಬಿಹಾರದ ಕಳ್ಳರ ತಂಡದ ನಾಯಕನೊಬ್ಬ ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿರುವ ಮುತ್ತೂಟ್ ಫೈನಾನ್ಸ್‌ಗೆ ಕನ್ನ ಹಾಕಲು ಯೋಜನೆ ರೂಪಿಸಿದ್ದ. ಅದಕ್ಕೆ ನೇಪಾಳದ ಸೆಕ್ಯೂರಿಟಿ ಗಾರ್ಡ್‌ಗಳ ಸಹಾಯ ಪಡೆದಿದ್ದು, ಒಟ್ಟು 12 ಮಂದಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ADVERTISEMENT

ಕಳವು ನಡೆಸಿದ ಬಳಿಕ ಎರಡು ತಂಡಗಳಾಗಿ ಪ್ರತ್ಯೇಕವಾದ ತಂಡ, ಕದ್ದ ಚಿನ್ನವನ್ನು ಹಂಚಿಕೊಂಡಿದೆ. ಈ ಪೈಕಿ, ಒಂದು ತಂಡ ನೇಪಾಳಕ್ಕೆ ತೆರಳಿದರೆ, ಮತ್ತೊಂದು ತಂಡ ದೆಹಲಿಗೆ ಹೋಗಿರುವ ಮಾಹಿತಿಯೂ ಪೊಲೀಸರಿಗೆ ಸಿಕ್ಕಿತ್ತು. ನೇಪಾಳದಲ್ಲಿರುವ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ತಂಡದ ನಾಯಕ ಮತ್ತು ಇತರ ಆರೋಪಿಗಳಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಲಿಂಗರಾಜಪುರ ಮೇಲ್ಸೇತುವೆಗೆ ಹೊಂದಿಕೊಂಡಿರುವಎಸ್ಸಾರ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ಮುತ್ತೂಟ್ ಫೈನಾನ್ಸ್‌ ಕಚೇರಿ ಇದೆ. ಕಚೇರಿಯ ಶೌಚಾಲಯದ ಗೋಡೆ ಕೊರೆದು ಕೃತ್ಯ ಎಸಗಿ ಕಳ್ಳರು ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.