ಬೆಂಗಳೂರು: ರಸ್ತೆಬದಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಆರೋಪದಡಿ ಇಬ್ಬರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
‘ಚಂದಾಪುರದ ಸಲ್ಮಾನ್ (22) ಹಾಗೂ ಜೆ.ಜೆ. ನಗರದ ಇಂಜಮಾಮ್ (23) ಬಂಧಿತರು. ಅವರಿಂದ ₹ 1 ಲಕ್ಷ ಮೌಲ್ಯದ ಐ–ಫೋನ್, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಠಾಣೆ ವ್ಯಾಪ್ತಿಯಲ್ಲಿ ಫೆ. 25ರಂದು ರಾತ್ರಿ ವ್ಯಕ್ತಿಯೊಬ್ಬರು ರಸ್ತೆಬದಿ ನಿಂತಿದ್ದರು. ತಮ್ಮ ಐ–ಫೋನ್ ಬಳಸಿ ಬಾಡಿಗೆ ದ್ವಿಚಕ್ರ ವಾಹನ ಕಾಯ್ದಿರಿಸುತ್ತಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಚಾಕುವಿನಿಂದ ಹಲ್ಲೆ ಮಾಡಿ ಐ–ಫೋನ್ ಕಿತ್ತುಕೊಂಡು ಹೋಗಿದ್ದರು. ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ವ್ಯಕ್ತಿ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.