ADVERTISEMENT

ಸುಲಿಗೆ ಮಾಡಿ ಪರಾರಿಯಾಗಿದ್ದ; ಗಾಂಜಾದಿಂದ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 3:08 IST
Last Updated 10 ಸೆಪ್ಟೆಂಬರ್ 2020, 3:08 IST

ಬೆಂಗಳೂರು: ಬೈಕ್‌ ಕದ್ದು ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬ ಗಾಂಜಾ ಮಾರಾಟ ಮಾಡಲು ಬಂದು ಚಂದ್ರಾ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪಲ್ಸರ್‌ ಬೈಕ್ ಮೇಲೆ ಸುತ್ತಾಡಿ ಗಾಂಜಾ ಮಾರುತ್ತಿದ್ದ ಆರೋಪದಡಿ ಗಂಗೊಂಡನಹಳ್ಳಿಯ ಮೊಯಿನುದ್ದೀನ್ ಪಾಷಾ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 310 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

‘ಅಪರಾಧ ಹಿನ್ನೆಲೆಯುಳ್ಳ ಮೊಯಿನುದ್ದೀನ್ ಹಾಗೂ ಆತನ ಸ್ನೇಹಿತ ಷಹನಾಜ್, 15 ದಿನಗಳ ಹಿಂದಷ್ಟೇ ರಾಮನಗರದಲ್ಲಿ ಬೈಕ್ ಕದ್ದಿದ್ದರು. ಅದೇ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ದಾರಿಹೋಕರನ್ನು ತಡೆದು ಮೊಬೈಲ್ ಸುಲಿಗೆ ಮಾಡಿದ್ದರು. ಮೊಬೈಲ್ ಹಾಗೂ ಬೈಕ್‌ ಮಾರಾಟ ಮಾಡಿ ಇಬ್ಬರೂ ತಲೆಮರೆಸಿಕೊಂಡಿದ್ದರು. ಮೊಯಿನುದ್ದೀನ್ ಜೊತೆಯಲ್ಲಿ ಷಹನಾಜ್‌ನನ್ನೂ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.’

ADVERTISEMENT

‘ಚಂದ್ರಾಲೇಔಟ್ ಠಾಣೆಯ ಪಿಎಸ್‌ಐ ಸವಿತಾ ಜಂಬಗಿ ಅವರು ಮಂಗಳವಾರ ಗಸ್ತಿನಲ್ಲಿದ್ದರು. ಬಿಸಿಸಿ ಲೇಔಟ್‌ನಲ್ಲಿ ಗಾಂಜಾ ಮರಾಟಕ್ಕೆ ಬಂದಿದ್ದ ಮೊಯಿನುದ್ದೀನ್ ಸಿಕ್ಕಿಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 29 ಮೊಬೈಲ್ ಸುಲಿಗೆ ಮಾಡಿದ್ದ ಸಂಗತಿಯೂ ಬಯಲಾಯಿತು’ ಎಂದೂ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.