ಬೆಂಗಳೂರು: ರೆಡ್ ಮರ್ಕ್ಯೂರಿ ಹೆಸರಿನಲ್ಲಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ದೂರು–ಪ್ರತಿ ದೂರು ದಾಖಲಾಗಿದೆ.
‘ಮನೋಜ್ ಹಾಗೂ ಆತನ ಸಹಚರರು ನನ್ನ ಬಳಿ ಇದ್ದ ₹ 3 ಲಕ್ಷ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ಶ್ರೀಧರ್ ಎಂಬುವರು ದೂರು ನೀಡಿದ್ದಾರೆ. ಪ್ರತಿದೂರು ನೀಡಿರುವ ಮನೋಜ್, ‘ನನಗೆ ಶ್ರೀಧರ್ ಜೀವಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಎರಡೂ ದೂರಿನನ್ವಯ ಎಫ್ಐಆರ್ ದಾಖಲಾಗಿದೆ.
‘ಬಾಣಸವಾಡಿಯ ನಿವಾಸಿಯಾದ ಶ್ರೀಧರ್ ಮೊಬೈಲ್ ಮಳಿಗೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಹಳೇ ಟಿವಿ ಮತ್ತು ರೆಡಿಯೋದಲ್ಲಿರುವ ರೆಡ್ ಮರ್ಕ್ಯೂರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಶ್ರೀಧರ್ ಅವರಿಗೆ ಕರೆ ಮಾಡಿದ್ದ ಸ್ನೇಹಿತನೊಬ್ಬ, ‘ಮನೋಜ್ ಬಳಿ ರೆಡ್ ಮರ್ಕ್ಯೂರಿ ಇದೆ. ಅದು ಕೋಟಿ ಬೆಲೆ ಬಾಳುತ್ತದೆ. ಅದನ್ನು ಪಡೆಯಲು ಮನೋಜ್ಗೆ ₹ 3 ಲಕ್ಷ ಕೊಡಬೇಕು’ ಎಂದಿದ್ದ. ಅದನ್ನು ನಂಬಿದ್ದ ಶ್ರೀಧರ್, ಹಣ ತೆಗೆದುಕೊಂಡು ಚನ್ನರಾಯಪಟ್ಟಣ ಬಳಿ ಹೋದಾಗ ಸುಲಿಗೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.