ADVERTISEMENT

ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ರೌಡಿ ಶೀಟರ್ ಸೇರಿ ಇಬ್ಬರ ಹತ್ಯೆ 

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 4:14 IST
Last Updated 26 ಆಗಸ್ಟ್ 2019, 4:14 IST

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ರೌಡಿ ಶೀಟರ್ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ಜೆ.ಪಿ.ನಗರದ 24ನೇ ಮುಖ್ಯ ರಸ್ತೆಯಲ್ಲಿ ಭಾನುವಾರ ರಾತ್ರಿ ನಡಿದಿದೆ.

ರೌಡಿ ಶೀಟರ್ ತಮ್ಮ ಮಂಜ ಮತ್ತು ನವೀನ್ ಹತ್ಯೆಯಾದವರು. ಜೆ.ಪಿ ನಗರದಲ್ಲಿರುವ ತಂದೂರ್ ಹೋಟೆಲ್‌ಗೆಮಂಜ ಮತ್ತು ನವೀನ್ ಊಟಕ್ಕೆ ಬಂದಿದ್ದರು.

ಆಕ್ಟೀವಾ ಸ್ಕೂಟರ್‌ನಲ್ಲಿಹೋಗುತ್ತಿದ್ದಾಗ ಹಿಂದಿನಿಂದ ಐ–20ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಕಾರು ಗುದ್ದಿಸಿದ ಬಳಿಕ ನಡು ರಸ್ತೆಯಲ್ಲೇ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. 5-6 ಜನರಿದ್ದ ಹಂತಕರ ತಂಡ 200 ಮೀಟರ್ ಅಂತರದಲ್ಲಿ ಇಬ್ಬರನ್ನೂ ಕೊಲೆ ಮಾಡಿದೆ.

ADVERTISEMENT

ತಮ್ಮ ಮಂಜನ ಹೆಸರು ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಪೊಲೀಸ್ ರಾಣೆಯ ಪಟ್ಟಿಯಲ್ಲಿದೆ. ಬಿಲ್ಡರ್ ಒಬ್ಬರ ಮಗನಾಗಿರುವ ನವೀನ್, ರಾತ್ರಿ ತಮ್ಮ ಮಂಜನ ಜೊತೆ ಊಟಕ್ಕೆ ಹೋಗಿದ್ದ.

ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣವೂ ಸೇರಿ ತಮ್ಮ ಮಂಜನ ವಿರುದ್ಧ ಎರಡು ಕೊಲೆ ಪ್ರಕರಣಗಳಿವೆ.ರಘು ಸಹಚರರು ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ.

ಕೃತ್ಯ ನಡೆಸುವುದಕ್ಕೂ ಮೊದಲೇ ಆರೋಪಿಗಳು ಕಾರಿನಲ್ಲಿ ಕುಡಿದು ಸಜ್ಜಾಗಿದ್ದರು ಎನ್ನಲಾಗಿದೆ. ಅಪಘಾತಕ್ಕೀಡಾದ ಕಾರನ್ನು ಕೃತ್ಯ ನಡೆದ ಸ್ಥಳದಲ್ಲೇ ಬಿಡಲಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ವೀರಭಧ್ರಸ್ವಾಮಿ ಎಂಬುವವರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಸಂಬಂಧ ಸದ್ಯ ಜೆ.ಪಿ ನಗರ ಮತ್ತು ಪುಟ್ಟೇನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಸೆಪೆಟ್ ಮತ್ತು ಡಿಸಿಪಿ ಶಶಿಕುಮಾರ್ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.