ADVERTISEMENT

ಪಾರ್ಟಿ ಮುಗಿಸಿ ಹೊರಟಿದ್ದವ ಕೊಲೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:28 IST
Last Updated 18 ಡಿಸೆಂಬರ್ 2020, 16:28 IST

ಬೆಂಗಳೂರು: ಆರ್‌.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಲೋಕೇಶ್ (25) ಎಂಬುವರನ್ನು ಚಾಕುವಿನಿಂದ ಇರಿದು ಗುರುವಾರ ಸಂಜೆ ಕೊಲೆ ಮಾಡಲಾಗಿದೆ.

‘ಜೆ.ಸಿ. ನಗರದ ಮುದ್ದಮ್ಮ ಗಾರ್ಡನ್ ನಿವಾಸಿ ಲೋಕೇಶ್, ಕಾಲ್‌ ಸೆಂಟರ್‌ ಉದ್ಯೋಗಿಯಾಗಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸ ಹೋಗಿತ್ತು. ತಿಮ್ಮಯ್ಯ ಲೇಔಟ್‌ನಲ್ಲಿ ಅವರನ್ನು ಕೊಲೆ ಮಾಡಲಾಗಿದ್ದು, ಪರಿಚಯಸ್ಥ ಶ್ರೀನಿವಾಸ್ ಹಾಗೂ ಆತನ ಸಹಚರರು ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.

‘ಲೋಕೇಶ್ ಗುರುವಾರ ಸಂಜೆ ಸ್ನೇಹಿತರೊಂದಿಗೆ ಬಾರ್‌ವೊಂದಕ್ಕೆ ಹೋಗಿ ಪಾರ್ಟಿ ಮಾಡಿದ್ದರು. ನಂತರ ಮನೆಯತ್ತ ಹೊರಟಿದ್ದರು. ಮಾರ್ಗಮಧ್ಯೆಯೇ ಆರೋಪಿ ಶ್ರೀನಿವಾಸ್ ಭೇಟಿ ಆಗಿದ್ದರು. ಇಬ್ಬರು ನಡುವೆ ಹಣಕಾಸು ವಿಚಾರವಾಗಿ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ವೇಳೆ ಆರೋಪಿ ಶ್ರೀನಿವಾಸ್ ಹಾಗೂ ಸಹಚರರು, ಲೋಕೇಶ್‌ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.’

ADVERTISEMENT

‘ರಸ್ತೆಯಲ್ಲಿ ಬಿದ್ದು ನರಳುತ್ತಿದ್ದ ಲೋಕೇಶ್ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ತಡರಾತ್ರಿ ಅಸುನೀಗಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.