
ಬೆಂಗಳೂರು: ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಮಾಹಿತಿ ನೀಡದೆ ನಿರ್ಲಕ್ಷಿಸಿದ ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಕಿರಣ್ ಅವರಿಗೆ ₹25 ಸಾವಿರ ದಂಡ ಮತ್ತು ಬೆಂಗಳೂರು ಉತ್ತರ ತಹಶೀಲ್ದಾರ್ ಮಧುರಾಜ್ ಅವರಿಗೆ ಮಾಹಿತಿ ಆಯೋಗ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ ₹25 ಸಾವಿರ ದಂಡ ವಿಧಿಸಿದೆ.
ನಿಗದಿತ ಅವಧಿಯಲ್ಲಿ ಮಾಹಿತಿ ನೀಡದಿರುವುದಲ್ಲದೆ, ಆಯೋಗದ ವಿಚಾರಣೆಗಳಿಗೂ ಸತತ ಗೈರು ಹಾಜರಾಗಿ ನಿರ್ಲಕ್ಷ್ಯ ತೋರಿದಕ್ಕಾಗಿ ಆಯೋಗ ಅಧಿಕಾರಿಗಳಿಗೆ ದಂಡ ವಿಧಿಸಿದೆ. ದಂಡ ವಿಧಿಸಿರುವುದಲ್ಲದೆ, ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಲಾಖಾ ವಿಚಾರಣೆ ನಡೆಸಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ಯಾಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಇಬ್ಬರೂ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ.
ಬೆಂಗಳೂರು ಬೆಳತೂರು ಕಾಲೊನಿ ನಿವಾಸಿ ವೆಂಕಟೇಶ್ ಅವರು ವರ್ಷಗಳ ಹಿಂದೆ ಕೆ.ದೊಮ್ಮಸಂದ್ರ ಗ್ರಾಮದ ತಮ್ಮ ಜಮೀನಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಒದಗಿಸುವಂತೆ ಬೆಂಗಳೂರು ಉತ್ತರದ ಉಪ ವಿಭಾಗಾಧಿಕಾರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಯೋಗಕ್ಕೆ ಅವರು ಮೇಲ್ಮನವಿ ಸಲ್ಲಿಸಿದ್ದರು.
ಆಯೋಗ ಎ.ಸಿ ಅವರಿಗೆ ವಿಚಾರಣೆಗೆ ಹಾಜರಾಗಿ ಈ ಬಗ್ಗೆ ವಿವರ ನೀಡುವಂತೆ ಸೂಚಿಸಿತ್ತು. ಹಲವು ವಿಚಾರಣೆಗಳಿಗೆ ಸತತ ಗೈರಾಗಿದ್ದ ಅಧಿಕಾರಿಗೆ ಕಾರಣ ಕೇಳಿ ಆಯೋಗ ನೋಟಿಸ್ ನೀಡಿತ್ತು. ಆದರೆ, ಅಧಿಕಾರಿ ಆಯೋಗದ ನೋಟಿಸ್ಗೆ ಉತ್ತರಿಸದೇ ನಿರ್ಲಕ್ಷಿಸಿದ್ದರು. ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ್ದಲ್ಲದೆ, ತಕ್ಷಣ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ಚಂದ್ರಪ್ಪ, ಮಾಳಗಾಳು ಗ್ರಾಮದ ತಮ್ಮ ಕುಟುಂಬದ ಆಸ್ತಿಯ ದಾಖಲೆಗಳಿಗಾಗಿ ಉತ್ತರ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಮಧುರಾಜ್ ಕೂಡ ಮಾಹಿತಿ ನೀಡದೆ, ವಿಚಾರಣೆಗಳಿಗೆ ಸತತ ಗೈರಾಗಿದ್ದರು. ಆಯೋಗ ನೀಡಿದ್ದ ಶೋಕಾಸ್ ನೋಟಿಸ್ಗೂ ಉತ್ತರಿಸಿರಲಿಲ್ಲ. ಅವರಿಗೂ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ₹50 ಸಾವಿರ ದಂಡ ವಿಧಿಸಿದ್ದಲ್ಲದೆ, ಅರ್ಜಿದಾರರಿಗೆ ತಕ್ಷಣ ಸೂಕ್ತ ದಾಖಲೆ ಒದಗಿಸುವಂತೆ ಆಯೋಗ ಆದೇಶಿಸಿದೆ.
ಉದ್ದೇಶಪೂರ್ವಕವಾಗಿ ಅರ್ಜಿದಾರರನ್ನು ಅಲೆದಾಡಿಸಿ ಸತಾಯಿಸುವ ಅಧಿಕಾರಿಗಳಿಂದ ಸಂತ್ರಸ್ತ ಅರ್ಜಿದಾರರಿಗೆ ಪರಿಹಾರ ಕೊಡಿಸಲೂ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ಆಯೋಗ ತಿಳಿಸಿದೆ.
ಇತ್ತೀಚೆಗೆ, ಇದೇ ರೀತಿ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದ ಬೆಂಗಳೂರು ದಕ್ಷಿಣ ಎಸಿ ವಿಶ್ವನಾಥ್, ದೊಡ್ಡಬಳ್ಳಾಪುರ ಎಸಿ ದುರ್ಗಾಶ್ರೀ, ಕೆ.ಆರ್. ಪುರಂ ತಹಶೀಲ್ದಾರ್ ರಾಜು, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಸೇರಿ ಹಲವು ಅಧಿಕಾರಿಗಳಿಗೆ ಆಯೋಗ ದಂಡ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.