
ಶಿವಾಜಿನಗರದ ರಸೆಲ್ ಮಾರುಕಟ್ಟೆ
ಬೆಂಗಳೂರು: ಶಿವಾಜಿನಗರದ ರಸೆಲ್ ಮಾರುಕಟ್ಟೆಯ ಮರು ಅಭಿವೃದ್ಧಿಗೆ ಕೂಡಲೇ ಟೆಂಡರ್ ಆಹ್ವಾನಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಸೆಲ್ ಮಾರುಕಟ್ಟೆಯ ಮರು ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಿದೆ. ಅದನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು. ರಸೆಲ್ ಮಾರುಕಟ್ಟೆ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಅದಕ್ಕೆ ಆಧುನಿಕ ಸ್ಪರ್ಶ ನೀಡುವ ಮೂಲಕ ಜನಸ್ನೇಹಿ ಮಾರುಕಟ್ಟೆಯಾಗಿ ರೂಪಿಸಬೇಕು. ಈ ಸಂಬಂಧ ಮಾರುಕಟ್ಟೆಯಲ್ಲಿರುವ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಬೇರೆಡೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ, ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮಾರುಕಟ್ಟೆ ಅಭಿವೃದ್ಧಿ ಸಂದರ್ಭದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ವ್ಯವಸ್ಥೆ ಮಾಡಿಸಲು ಸೂಚಿಸಿದರು.
ಜಲಮಾರ್ಗ: ಹಲಸೂರು ಕೆರೆಗೆ ಮೂರು ಒಳಹರಿವುಗಳಿದ್ದು, ಅವುಗಳನ್ನು ಪರಿಶೀಲಿಸಿ ಕೆ–100 ಮಾದರಿಯಲ್ಲಿ ನಾಗರಿಕ ಜಲಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಜೊತೆಗೆ ಹಲಸೂರು ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ವರ್ ರಾವ್ ನಿರ್ದೇಶನ ನೀಡಿದರು.
ಹಲಸೂರು ಕೆರೆಯ ಬಳಿಯ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ವಾಯುವಿಹಾರ ಮಾರ್ಗ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ‘ಶಿವಾಜಿನಗರ ವ್ಯಾಪ್ತಿಯಲ್ಲಿರುವ ರಸೆಲ್ ಮಾರುಕಟ್ಟೆ ಅತ್ಯಂತ ಪುರಾತನ ಕಟ್ಟಡವಾಗಿದ್ದು, ಅದಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಮರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ
ಬೆಂಗಳೂರು ಕೇಂದ್ರ ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಟೆಂಡರ್ ಆಹ್ವಾನಿಸಲಾಗಿದೆ.
ಕಮರ್ಷಿಯಲ್ ಸ್ಟ್ರೀಟ್ನಿಂದ ಒಪಿಎಚ್ ರಸ್ತೆ, ಮೈನ್ ಗಾರ್ಡ್ ರಸ್ತೆಯಿಂದ ಸಫೀನಾ ಪ್ಲಾಜಾ– ಡಿಸ್ಪೆನ್ಸರಿ ರಸ್ತೆ ಮತ್ತು ಡಿಕನ್ಸನ್ ರಸ್ತೆ.
ಡಿಸ್ಪೆನ್ಸರಿ ರಸ್ತೆಯಿಂದ ಕಾಮರಾಜ ರಸ್ತೆ, ಇಬ್ರಾಹಿಂ ಸಾಹಿಬ್ ಸ್ಟ್ರೀಟ್. ಮಿಲ್ಲರ್ ರಸ್ತೆ ಜಂಕ್ಷನ್, ಪ್ಲಾನಿಟೊರಿಯಂ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಸೇಂಟ್ ಜಾನ್ಸ್ ರಸ್ತೆ.
ದತ್ತಾತ್ರೇಯ ವಾರ್ಡ್ನಲ್ಲಿ 2ನೇ ಟೆಂಪಲ್ ರಸ್ತೆ, ಸಂಪಿಗೆ ರಸ್ತೆ, ರೈಲ್ವೆ ಪ್ಯಾರಲಲ್ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ.
ಮಾವಳ್ಳಿ ಟ್ಯಾಂಕ್ ಬಂಡ್ ರಸ್ತೆ, ಡಿವಿಜಿ ರಸ್ತೆ, ಶಂಕರಮಠ ರಸ್ತೆ, ಪಿಎಂಕೆ ರಸ್ತೆ.
ವಾಣಿವಿಲಾಸ್ ರಸ್ತೆ, ವಾಸವಿ ದೇವಸ್ಥಾನ ರಸ್ತೆ, ಕನಕಪುರ ರಸ್ತೆ, ಡಯಾಗನಲ್ ರಸ್ತೆ, ಪಟಾಲಮ್ಮ ರಸ್ತೆ,
ಟಿ. ಮರಿಯಪ್ಪ ರಸ್ತೆ.
ಕಾರುಗಳಿಗೆ ಪ್ರತಿ ಗಂಟೆಗೆ ₹30, ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ₹15, ನಿತ್ಯದ ಪಾಸ್ಗೆ ಕ್ರಮಗಾಗಿ ₹150 ಮತ್ತು ₹75 ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.