ಬೆಂಗಳೂರು: ‘ನಾಡಹಬ್ಬ ದಸರಾ ಉದ್ಘಾಟಿಸಿದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ತಾವು ಉಣ್ಣುವ ಆಹಾರ ಬೆಳೆಯುವ ಅನ್ನದಾತರುನೆರೆ, ಬರದಿಂದ ಬಳಲಿರುವುದು ಕಾಣಿಸಲಿಲ್ಲವೇ?’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಶ್ನಿಸಿದೆ.
‘ಭೈರಪ್ಪ ಅವರು ಉಂಡ ಮನೆಯ ಜಂತಿ ಎಣಿಸುವಂತೆ ಕನ್ನಡ ನಾಡನ್ನು ಅಪಮಾನಿಸಿದ್ದಾರೆ.ಅವರ ಅವೈಜ್ಞಾನಿಕ ವಿಚಾರಧಾರೆ, ಸಂವಿಧಾನ ವಿರೋಧಿ ಮಾತುಗಳು, ಮೌಢ್ಯ, ಕೋಮುವಾದ ಬಿತ್ತುವ ಮತ್ತು ಮಹಿಳಾ ವಿರೋಧಿ ನಡೆ ಖಂಡನೀಯ’ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ಮತ್ತು ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಮತ್ತು ಕೇಂದ್ರ ಮಂತ್ರಿಗಳನ್ನು ಅಕ್ಕಪಕ್ಕ ಕೂಡಿಸಿಕೊಂಡು ಮಾತನಾಡಿದ ಭೈರಪ್ಪ ಅವರು ನೆರೆ ಸಂತ್ರಸ್ತರಿಗೆ ಒಂದು ಪೈಸೆ ನೆರವು ಯಾಕೆ ಮಾಡಿಲ್ಲ ಎಂದು ಕೇಳುವ ಎದೆಗಾರಿಕೆ ಏಕೆ ತೋರಿಸಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
‘ಒಬ್ಬ ಸಾಹಿತಿಗೆ ಇರಬೇಕಾದ ಕನಿಷ್ಠ ಜ್ಞಾನವೂ ಇಲ್ಲದ ಭೈರಪ್ಪ ನಮ್ಮ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಮುಟ್ಟಾದ ಮಹಿಳೆ ದೇಗುಲಕ್ಕೆ ಹೋಗಬಾರದೆಂಬ ಅವರ ನಿಲುವು ತಾಯಿ ದ್ರೋಹಿಯಾಗಿದೆ. ಅಯ್ಯಪ್ಪ ದೇವಸ್ಥಾನದೊಳಗೆ ಮಹಿಳೆಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟಿಗೆ ಹೋಗಿದ್ದು ಯಾರು ಎಂಬ ಅರಿವು ಅವರಿಗಿದೆಯೇ? ಕೇರಳದ ಯಂಗ್ ಲಾಯರ್ಸ್ ಹೆಸರಿನಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದರು ಸುಪ್ರೀಂ ಕೋರ್ಟ್ ಸಂವಿಧಾನವನ್ನು ಎತ್ತಿ ಹಿಡಿದು ತೀರ್ಪಿತ್ತಿದೆ ಮತ್ತು ಕೇರಳ ಸರ್ಕಾರ ತೀರ್ಪು ಜಾರಿ ಮಾಡಿದೆ. ಇದಕ್ಕೆ ಕಮ್ಯುನಿಸ್ಟರ ಮೇಲೆ ಏಕೆ ಉರಿದು ಬೀಳಬೇಕು’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.