ಬೆಂಗಳೂರು: ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಪ್ರಬುದ್ಧ ಮಾತ್ರವಲ್ಲ ನಿತ್ಯ ಸುಳ್ಳು ಹೇಳುವ ವ್ಯಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಟೀಕಿಸಿದ್ದಾರೆ.
ಬಿಜೆಪಿ ವರಿಷ್ಠರಿಗೆ ₹1800 ಕೋಟಿ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಕಾಂಗ್ರೆಸ್–ಜೆಡಿಎಸ್ ಸಮಾವೇಶದಲ್ಲಿ ಆರೋಪಿಸಿದ್ದರು. ಈ ಸಂಬಂಧ ಸೋಮವಾರ ಪ್ರಕಟಣೆ ನೀಡಿರುವ ಕೃಷ್ಣ, ‘ಈ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೂ, ರಾಹುಲ್ ಗಾಂಧಿ ಸುಳ್ಳನ್ನು ಮತ್ತೆ ಹೇಳುತ್ತಿದ್ದಾರೆ. ದೇಶದ ಹಳೆಯ ಪಕ್ಷದ ನಾಯಕರಿಗೆ ಈ ಹೇಳಿಕೆ ಶೋಭೆ ತರುವಂತಹುದು ಅಲ್ಲ’ ಎಂದು ಟೀಕಿಸಿದ್ದಾರೆ.
‘ಉದ್ಯಮಿ ನೀರವ್ ಮೋದಿ ಪರಾರಿಯಾಗಲು ಎನ್ಡಿಎ ಸರ್ಕಾರ ನೆರವು ನೀಡಿದೆ ಎಂದು ಮತ್ತೊಂದು ಸುಳ್ಳನ್ನು ಹೇಳಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೀರವ್ ಮೋದಿ ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಸಾಲ ವಸೂಲಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ’ ಎಂದು ಅವರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.