ADVERTISEMENT

ಕನ್ನಡಿಗರನ್ನು ಕರೆತರಲು ಸಿದ್ಧತೆ: ಸಚಿವ ಸುರೇಶ್‌ ಕುಮಾರ್‌

ಕೊರೊನಾ ವೈರಸ್‌ ತಂದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 22:09 IST
Last Updated 29 ಏಪ್ರಿಲ್ 2020, 22:09 IST
ಎಸ್.ಸುರೇಶ್ ಕುಮಾರ್
ಎಸ್.ಸುರೇಶ್ ಕುಮಾರ್   

ಬೆಂಗಳೂರು: ‘ಕೊರೊನಾ ವೈರಸ್‌ನಿಂದಾಗಿ ಹೊರದೇಶಗಳಲ್ಲಿ ಸಂಕಷ್ಟದಲ್ಲಿರುವ 10,823 ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅವರನ್ನು ಪ್ರತ್ಯೇಕವಾಗಿ ಇಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

‘ಇದಕ್ಕಾಗಿ ಕೇಂದ್ರ ಸರ್ಕಾರ ಸಮನ್ವಯ ಕಾರ್ಯದ ನಿರ್ದೇಶನ ನೀಡಿದೆ. ಕರೆತರುವವರ ಪೈಕಿ 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,284 ವೃತ್ತಿಪರ ಕೆಲಸ ಮಾಡುವವರು ಸೇರಿದ್ದಾರೆ. ಅವರೆಲ್ಲರನ್ನೂ ವಿಮಾನಿಲ್ದಾಣ
ದಲ್ಲೇ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬೆಳವಣಿಗೆ ಗತಿ ಶೇ 1.25: ‘ಕಳೆದ 5 ದಿನಗಳಲ್ಲಿ 60 ಪ್ರಕರಣಗಳು ದೃಢಪಟ್ಟಿದ್ದು, 64 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಬೆಳವಣಿಗೆ ದರ ಶೇ 1.25ರಷ್ಟಾಗಿದೆ’ ಎಂದರು.

ADVERTISEMENT

‘ನಗರದಲ್ಲಿ ಕೋವಿಡ್ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಸರ್ಕಾರಿ ನೌಕರರ ಆರೋಗ್ಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಬುಧವಾರದಿಂದ ಕೆ.ಸಿ.ಜನರಲ್ ಆಸ್ಪತ್ರೆ ಯಲ್ಲಿ ತಪಾಸಣಾ ಅಭಿಯಾನವು ಪ್ರಾರಂಭವಾಗಿದೆ’ ಎಂದು ತಿಳಿಸಿದರು.

‘ಗುಣಮುಖರಾಗಿ ಹಿಂತಿರುಗಿರುವ ವ್ಯಕ್ತಿಗಳಿಗೆ ನಂತರದ ದಿನಗಳಲ್ಲಿ ಕ್ವಾರಂಟೈನ್ ಅನ್ನು ಯಾವ ರೀತಿಯಲ್ಲಿ ಅನುಸರಿಸಬೇಕೆಂಬ ಬಗ್ಗೆ ಸಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯದ ಆರೋಗ್ಯ ಇಲಾಖೆ ಹೊರಡಿಸಿದೆ’ ಎಂದರು.

ಕಲಬುರ್ಗಿಗೆ ವಿಶೇಷ ಗಮನ: ‘ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಗುಣಮುಖರಾಗುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅಲ್ಲಿನ ಪರಿಸ್ಥಿತಿಯನ್ನು ವಿಶೇಷವಾಗಿ ಗಮನಿಸಲಾಗುತ್ತಿದೆ. ಉಸ್ತುವಾರಿ ಕಾರ್ಯದರ್ಶಿ ಅವರನ್ನು ಅಲ್ಲೇ ಇರಲು ತಿಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.