ಬೆಂಗಳೂರು: ‘ಜೀವನದಲ್ಲಿ ಸಾಹಿತ್ಯ, ಸಂಸ್ಕೃತಿ ಮುಖ್ಯ. ಸಾಹಿತಿಗಳ ಸಂದೇಶಗಳನ್ನು ಅರಿತು, ಅರ್ಥೈಸಿಕೊಂಡು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಸಲಹೆ ನೀಡಿದರು.
ಡಾ. ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ‘ಸಂಸ್ಕೃತಿ ಸಿರಿ–2022’ ಪ್ರಶಸ್ತಿ ಪ್ರದಾನ ಮಾಡಿ ಅವರು ಭಾನುವಾರ ಮಾತನಾಡಿದರು.
‘ಒಂದು ವ್ಯಕ್ತಿಯಿಂದ ಒಂದು ವಿಷಯ, ವಿಚಾರವನ್ನು ಕೇಳಿದಾಗ ಅದನ್ನು ತಿಳಿದುಕೊಳ್ಳಬೇಕು. ಮಿದುಳಿಗೆ ತೆಗೆದುಕೊಂಡು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ವಿಷಯಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಯೋಚಿಸಬೇಕು’ ಎಂದು ಅವರು ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಮಾತನಾಡಿ,‘ಈಗಿನ ದಿನಗಳಲ್ಲಿ ಸರ್ಕಾರಕ್ಕೂ ಅರ್ಜಿ ಹಾಕಿ ಪ್ರಶಸ್ತಿಗಳನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಗಳನ್ನು ಕಟ್ಟಿದವರನ್ನು, ಸಂಸ್ಕೃತಿ ಬೆಳೆಸಿದವರು ಸೇರಿದಂತೆ ಎಲ್ಲ ಕ್ಷೇತ್ರಕ್ಕೆ ಸೇರಿದವರಿಗೆ ಪ್ರಶಸ್ತಿ ನೀಡಿರುವುದು ಅಭಿನಂದನೀಯ’ ಎಂದು ಹೇಳಿದರು.
‘ಸಂಸ್ಕೃತಿ ಸಿರಿ’–2022 ಪ್ರಶಸ್ತಿಯನ್ನು ಭಾಜನರಾದ ಗಾಯಕಿ ಕಸ್ತೂರಿ ಶಂಕರ್, ವಾಗ್ಮಿ ಸುಧಾ ಬರಗೂರು, ಪರಿಸರ ತಜ್ಞ- ಲೇಖಕ ನಾಗೇಶ್ ಹೆಗಡೆ, ಕನ್ನಡಪರ ಹೋರಾಟಗಾರ ರಾಮಣ್ಣ ಕೋಡಿಹೊಸಳ್ಳಿ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಕಾಡುಮಲೇಶ್ವರ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಶಿವರಾಂ, ನೃತ್ಯ ಗುರು ಸುಪರ್ಣ ವೆಂಕಟೇಶ್, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಡಿದಾಳ್ ಪ್ರಕಾಶ್ ಅವರಿಗೆ ನೀಡಲಾಯಿತು. ₹25 ಸಾವಿರ ನಗದು, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ಹಿ.ಜಿ. ಬೋರಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಆನಂದ ಮಾದಲಗೆರೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.