ADVERTISEMENT

ಮೂಢನಂಬಿಕೆಯಿಂದ ಹಣ–ಸಮಯ ವ್ಯಯ: ಸಚಿವ ಸತೀಶ ಜಾರಕಿಹೊಳಿ

ಪ್ರೆಸ್‌ಕ್ಲಬ್‌ನಿಂದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 14:32 IST
Last Updated 19 ಫೆಬ್ರುವರಿ 2026, 14:32 IST
<div class="paragraphs"><p>ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಕುಮಾರ್ ಬೆಳ್ಳಿತಟ್ಟೆ, ಶರಣ ಬಸಪ್ಪ, ರವಿವರ್ಮ ಕುಮಾರ್, ರಿಜ್ವಾನ್ ಅರ್ಷದ್, ಶ್ರೀಧರ್, ಕೆ.ವಿ. ಪ್ರಭಾಕರ್, ಬಿ.ಎನ್. ಮೋಹನ್ ಕುಮಾರ್ ಉಪಸ್ಥಿತರಿದ್ದರು </p></div>

ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಕುಮಾರ್ ಬೆಳ್ಳಿತಟ್ಟೆ, ಶರಣ ಬಸಪ್ಪ, ರವಿವರ್ಮ ಕುಮಾರ್, ರಿಜ್ವಾನ್ ಅರ್ಷದ್, ಶ್ರೀಧರ್, ಕೆ.ವಿ. ಪ್ರಭಾಕರ್, ಬಿ.ಎನ್. ಮೋಹನ್ ಕುಮಾರ್ ಉಪಸ್ಥಿತರಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜನರನ್ನು ಸರಿದಾರಿಗೆ ತರಲು ಮೂಢನಂಬಿಕೆ ವಿರುದ್ಧ ಜಾಗೃತಿ ಅಭಿಯಾನ ಮಾಡಲಾಗುತ್ತಿದೆಯೇ ಹೊರತು, ಇದರ ಹಿಂದೆ ಯಾವುದೇ ಧರ್ಮ, ಸಮುದಾಯ ವಿರೋಧಿಸುವ ಉದ್ದೇಶವಿಲ್ಲ. ಮೂಢನಂಬಿಕೆಯಿಂದ ಜನರು ಕಷ್ಟಕ್ಕೆ ಒಳಗಾಗಿ, ಹಣ ಮತ್ತು ಸಮಯ ವ್ಯಯಮಾಡುತ್ತಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. 

ADVERTISEMENT

ಪ್ರೆಸ್‌ ಕ್ಲಬ್ ಆಫ್ ಬೆಂಗಳೂರು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

‘ಅಧಿಕಾರ ಮತ್ತು ಹಣ ಶಾಶ್ವತವಲ್ಲ. ನಾವು ಮಾಡಿದ ಕೆಲಸಗಳು ಮಾತ್ರ ಕೊನೆಯವರೆಗೂ ಉಳಿಯುತ್ತವೆ. ಆದ್ದರಿಂದ ಆ ನಿಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದೇನೆ. ಜನ ಪರವಾದ, ಜನರನ್ನು ಸರಿದಾರಿಗೆ ತರುವ ಕಾರ್ಯ ಕೈಗೊಂಡಿದ್ದೇನೆ. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಬೇಕೆಂಬ ಛಲ ಹೊಂದಿದ್ದೇನೆ. ಕನಿಷ್ಠ 10 ವರ್ಷ ರಾಜಕೀಯದಲ್ಲಿ ಇರಲಿದ್ದು, ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ’ ಎಂದರು. 

ಪ್ರಶಸ್ತಿ ಪ್ರದಾನ ಮಾಡಿದ ವಕೀಲ ರವಿವರ್ಮ ಕುಮಾರ್, ‘ಧರ್ಮದ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ವಚನ ಭ್ರಷ್ಟರು. ನಾವು ಮೂಢನಂಬಿಕೆಗೆ ವಿರುದ್ಧ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸತೀಶ ಜಾರಕಿಹೊಳಿ ಅವರು ವೈಜ್ಞಾನಿಕ ಮನೋಭಾವ ಹೊಂದಿದ್ದಾರೆ. ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಲಿ’ ಎಂದು ಆಶಿಸಿದರು. 

ಮುಖ್ಯಮಂತ್ರಿ ಅವರ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್, ‘ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ, ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆಯ ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ’ ಎಂದು ಶ್ಲಾಘಿಸಿದರು.

ಶಾಸಕ ರಿಜ್ವಾನ್ ಅರ್ಷದ್, ‘ಮೂಢನಂಬಿಕೆ ವಿರುದ್ಧ ಮಾತನಾಡಿದವರಿಗೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇಂತಹ ವಾತಾವರಣದ ನಡುವೆಯೂ ಸತೀಶ ಜಾರಕಿಹೊಳಿ ಅವರು ತಾವು ನಂಬಿದ ಸಿದ್ಧಾಂತವನ್ನು ಪಾಲಿಸಿಕೊಂಡು ರಾಜಕೀಯ ಜೀವನದಲ್ಲಿ ಮುಂದೆ ಬಂದಿದ್ದಾರೆ’ ಎಂದು ಶ್ಲಾಘಿಸಿದರು. 

ಪ್ರೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಲು ಸೇತುವೆ ನಿರ್ಮಾಣ

‘ಮಲೆನಾಡು ಭಾಗದ ಜನರು ಮಳೆಗಾಲದ ಅವಧಿಯಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲು ಕಾಲು ಸಂಕ ಅವಲಂಬಿಸುತ್ತಾರೆ. ಕಾರವಾರದಲ್ಲಿ ತೂಗುಸೇತುವೆಯ ಮೂಲಕ ಮಕ್ಕಳು ಸಾಗುತ್ತಿದ್ದ ಫೋಟೋ 20 ವರ್ಷಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು. ಅದನ್ನು ನೋಡಿ ನಾನು ಮರುಗಿದ್ದೆ. ಈಗಲೂ ಆ ಫೋಟೋ ನನ್ನ ಕಣ್ಣಮುಂದಿದೆ. ಲೋಕೋಪಯೋಗಿ ಇಲಾಖೆ ನನಗೆ ದೊರೆತ ಬಳಿಕ ಮೊದಲು ಮಲೆನಾಡು ಭಾಗದಲ್ಲಿ ಕಾಲು ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಈಗಾಗಲೇ 400 ಕಾಲು ಸೇತುವೆ ನಿರ್ಮಿಸಲಾಗಿದೆ. ಇನ್ನೂ 400 ಕಾಲು ಸೇತುವೆ ನಿರ್ಮಿಸಲಾಗುವುದು’ ಎಂದು ಸತೀಶ ಜಾರಕಿಹೊಳಿ ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.