
ಬೆಂಗಳೂರು: ರಾಜ್ಯದಲ್ಲಿ 2024ಕ್ಕೆ ಹೋಲಿಸಿದರೆ ಕಳೆದ ವರ್ಷ (2025) ಪೋಕ್ಸೊ, ಹಲ್ಲೆ, ಮಾದಕವಸ್ತು ನಿಯಂತ್ರಣ, ಅಬಕಾರಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳವಾಗಿವೆ.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ 10 ಡಿಸಿಆರ್ಇ (ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ) ಘಟಕಗಳು ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, 2024ರ ಡಿಸೆಂಬರ್ನಲ್ಲಿ ಡಿಸಿಆರ್ಇ ಘಟಕಗಳಿಗೆ ಹೆಚ್ಚಿನ ಅಧಿಕಾರ ನೀಡಿ, 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿತ್ತು. ಕಳೆದ ವರ್ಷ 2,277 ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೊಸದಾಗಿ ಸ್ಥಾಪಿಸಿರುವ ವಿಶೇಷ ಪೊಲೀಸ್ ಠಾಣೆಗಳಲ್ಲಿಯೇ ನೂರಾರು ಪ್ರಕರಣಗಳು ದಾಖಲಾಗಿವೆ. ಎಫ್ಐಆರ್ ದಾಖಲು ಪ್ರಕ್ರಿಯೆ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆಗೂ ವೇಗ ಸಿಕ್ಕಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2024ಕ್ಕೆ ಹೋಲಿಸಿದರೆ 2025ರಲ್ಲಿ ಎರಡು ಸಾವಿರದಷ್ಟು ಎನ್ಡಿಪಿಎಸ್ ಪ್ರಕರಣಗಳು ಏರಿಕೆ ಕಂಡಿವೆ. ಅಧಿಕೃತ ಮಾರಾಟ ಮಳಿಗೆ ಹೊರತು ಪಡಿಸಿಯೂ ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಇಂತಹ ಕಿರಾಣಿ ಅಂಗಡಿಗಳ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಕಳೆದ ವರ್ಷ 9,242 ಪ್ರಕರಣ ದಾಖಲಿಸಿದ್ದರು.
ಇದೇ ಹೊತ್ತಿನಲ್ಲಿ ಕೆಲವು ಅಪರಾಧ ಪ್ರಕರಣಗಳು ಇಳಿಕೆ ಕಂಡಿವೆ. ಕೊಲೆ, ರಾಬರಿ, ಡಕಾಯಿತಿ, ಗಲಭೆ, ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇಳಿಕೆ ಆಗಿರುವುದು ಪೊಲೀಸ್ ಇಲಾಖೆ ಸಂಗ್ರಹಿಸಿರುವ ಅಂಕಿಅಂಶದಿಂದ ಗೊತ್ತಾಗಿದೆ.
2023ರಲ್ಲಿ 1,293 ಕೊಲೆಗಳು ನಡೆದಿದ್ದವು. ಅದೇ 2024ರಲ್ಲಿ 1,208 ಹಾಗೂ 2025ರಲ್ಲಿ 1,131 ಕೊಲೆಗಳು ನಡೆದಿವೆ. ಹಳೆಯ ದ್ವೇಷ, ಶೀಲ ಶಂಕೆ, ಜಮೀನಿಗೆ ಸಂಬಂಧಿಸಿದ ವ್ಯಾಜ್ಯ, ಪ್ರೇಮ ವೈಫಲ್ಯ, ಪ್ರತಿಷ್ಠೆಗಾಗಿ ರೌಡಿಗಳ ನಡುವೆ ಕಾಳಗ, ಸಾಲ ಮರು ಪಾವತಿ ಮಾಡದ ವಿಚಾರ, ಎರಡು ಗುಂಪುಗಳ ನಡುವೆ ಘರ್ಷಣೆ, ಚಿನ್ನಾಭರಣ ಹಾಗೂ ಇತರೆ ಕಾರಣಗಳಿಗೆ ರಾಜ್ಯದಲ್ಲಿ ಕೊಲೆಗಳು ನಡೆದಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ.
‘2019ರಲ್ಲಿ 2,197 ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಪ್ರಕರಣಗಳು ದಾಖಲಾಗಿದ್ದವು. ಅದೇ 2024ರಲ್ಲಿ 4,061 ಹಾಗೂ 2025ರಲ್ಲಿ 4,096 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೊ ಪ್ರಕರಣಗಳಲ್ಲಿ ಸಮರ್ಪಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ತನಿಖೆ ನಡೆಸಬೇಕು. ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಎಲ್ಲಾ ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸ್ ಇಲಾಖೆಯು 2025ರ ಜುಲೈನಲ್ಲಿ ‘ಮನೆ ಮನೆಗೆ ಪೊಲೀಸ್’ ಎಂಬ ನೂತನ ಕಾರ್ಯಕ್ರಮ ಜಾರಿಗೆ ತಂದಿತ್ತು. ಅದರ ಪರಿಣಾಮ ಜನರಲ್ಲಿ ಜಾಗೃತಿ ಮೂಡಿದ್ದು, ಎಲ್ಲೇ ಅಪರಾಧ ಕೃತ್ಯಗಳು ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಜಾರಿಯಾದ ಮೇಲೆ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದ್ದು, ಮನೆಗಳ್ಳತನ, ದರೋಡೆ, ಡಕಾಯಿತಿ ಸೇರಿದಂತೆ ಕೆಲವು ಅಪರಾಧ ಪ್ರಕರಣಗಳು ಸ್ವಲ್ಪ ಕಡಿಮೆ ಆಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹೆಸರು ಗೋಪ್ಯ: ‘ಮನೆ ಮನೆಗೆ ಪೊಲೀಸ್’ ಈ ಕಾರ್ಯಕ್ರಮ ಆರಂಭವಾದ ಮೇಲೆ ಕೆಲವು ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಈ ಕಾರ್ಯಕ್ರಮ ಜಾರಿಗೂ ಮುನ್ನ ಪೊಲೀಸರು ಬಡಾವಣೆಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದರು. ಇದೀಗ ಯಾವ ಮನೆಗೆ ಯಾರು ಬಂದಿದ್ದಾರೆ? ಮನೆಯವರು ಏನು ಕೆಲಸ ಮಾಡುತ್ತಿದ್ದಾರೆ? ಯಾವ ಸಮಸ್ಯೆಗಳಿವೆ ಎಂಬ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ದತ್ತಾಂಶವು ಪೊಲೀಸ್ ಇಲಾಖೆಯಲ್ಲಿ ಇರಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.