ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರು, ಜಿಲ್ಲಾ ಕಾರ್ಯದರ್ಶಿಗಳು, ಲೀಡರ್, ಟ್ರೈನರ್ಸ್ಗಳನ್ನು ಥಾವರಚಂದ್ ಗೆಹಲೋತ್, ಕೆ.ಕೆ. ಖಂಡೇಲ್ವಾಲ್, ಪಿ.ಜಿ.ಆರ್. ಸಿಂಧ್ಯ, ಕೊಂಡಜ್ಜಿ ಷಣ್ಮುಖಪ್ಪ, ಗೀತಾ ನಟರಾಜ್, ಎಂ.ಎ. ಖಾಲೀದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಸೇವಾ ಮನೋಭಾವ, ಶಿಸ್ತಿನ ಮತ್ತು ದೇಶಭಕ್ತಿಯ ಯುವಜನರು ದೇಶಕ್ಕೆ ಅಗತ್ಯ. ಅಂಥ ಫಲಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನೀಡುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶ್ಲಾಘಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್– ಕರ್ನಾಟಕ ಆಯೋಜಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರು, ಜಿಲ್ಲಾ ಕಾರ್ಯದರ್ಶಿಗಳು ಮತ್ತು ಲೀಡರ್ ಟ್ರೈನರ್ಗಳಿಗೆ ಶುಕ್ರವಾರ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಶತಮಾನದ ಇತಿಹಾಸವನ್ನು ಹೊಂದಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮಕ್ಕಳಲ್ಲಿ, ಯುವಜನರಲ್ಲಿ ನೈತಿಕ ಮೌಲ್ಯ, ಸಮರ್ಪಣಾ ಭಾವ, ನಾಯಕತ್ವ ಕೌಶಲ ಬೆಳೆಸಲು ಶ್ರಮಿಸುತ್ತಿದೆ. ಸೇವೆಯೇ ಧರ್ಮ ಎಂಬ ಮನೋಭಾವದ ಆಂದೋಲನವನ್ನು ಮುನ್ನಡೆಸುತ್ತಿದೆ. ವಿಪತ್ತು ಪರಿಹಾರ, ಪರಿಸರ ಸಂರಕ್ಷಣಾ ಉಪಕ್ರಮ, ಆರೋಗ್ಯ ಜಾಗೃತಿ ಅಭಿಯಾನ, ರಕ್ತದಾನ, ಸ್ವಚ್ಛತಾ ಅಭಿಯಾನಗಳು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಂಡದ ನೇತೃತ್ವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ನವದೆಹಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಮುಖ್ಯ ಆಯುಕ್ತ ಕೆ.ಕೆ. ಖಂಡೇಲ್ವಾಲ್, ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಭಾರತ್ ಸ್ಕೌಟ್ಸ್ ರಾಜ್ಯ ಆಯುಕ್ತ ಎಂ.ಎ. ಖಾಲಿದ್, ಗೈಡ್ಸ್ ರಾಜ್ಯ ಆಯುಕ್ತರಾದ ಗೀತಾ ನಟರಾಜ್, ಬಿ.ವಿ. ರಾಮಲತಾ, ರಾಜ್ಯ ಕೋಶಾಧಿಕಾರಿ ಟಿ. ಪ್ರಭಾಕರ್, ಸ್ಕೌಟ್ಸ್ ಆಯುಕ್ತ ಕೊಂಡಜ್ಜಿ ಷಣ್ಮುಖಪ್ಪ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.