ಬೆಂಗಳೂರು: ಗಾಂಧಿನಗರದಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ಕಟೌಟ್ ಬದಲಾಯಿಸಲು ಹೋಗಿ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
‘ಮೃತ ವ್ಯಕ್ತಿ ಹೆಸರು ತಿಳಿದುಬಂದಿಲ್ಲ. ಆದರೆ, ಅವರ ಬಟ್ಟೆ ಮೇಲೆ ‘ರಾಜು ಸೆಕ್ಯುರಿಟಿ ಏಜೆನ್ಸಿ, ಸುಲ್ತಾನ್ಪಾಳ್ಯ’ ಎಂಬ ಬರಹವಿದೆ. ಇದರ ಮೂಲಕ ಮೃತರ ಹೆಸರು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ತ್ರಿವೇಣಿ ಚಿತ್ರಮಂದಿರದ ಎದುರು ಸಿನಿಮಾ ಕಟೌಟ್ ಇದೆ. ಹೊಸ ಸಿನಿಮಾ ಬರುತ್ತಿದ್ದರಿಂದ ಕಟೌಟ್ ಬದಲಾವಣೆ ಮಾಡಲಾಗುತ್ತಿತ್ತು. ಹಳೇ ಸಿನಿಮಾದ ಕಟೌಟ್ ತೆಗೆದು ಹೊಸ ಕಟೌಟ್ ಹಾಕಲಾಗುತ್ತಿತ್ತು. ಸೆಕ್ಯುರಿಟಿ ಸಿಬ್ಬಂದಿ ಆಗಿದ್ದ ವ್ಯಕ್ತಿ, ಕಟೌಟ್ ಮೇಲೆ ಹತ್ತಿ ಪೋಸ್ಟರ್ ಬದಲಾವಣೆ ಮಾಡುತ್ತಿದ್ದರು. ಅದೇ ವೇಳೆಯೇ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
‘ಘಟನೆ ವೇಳೆ ಚಿತ್ರಮಂದಿರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಯಾರು ಇರಲಿಲ್ಲ. ಸೆಕ್ಯುರಿಟಿ ಸಿಬ್ಬಂದಿ ಬಿದ್ದಿದ್ದು ನೋಡಿ ದಾರಿಹೋಕರು ರಕ್ಷಣೆಗೆ ಹೋಗಿದ್ದರು. ತೀವ್ರ ರಕ್ತಸ್ರಾವವಾಗಿದ್ದರಿಂದ ಸೆಕ್ಯುರಿಟಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಹೇಳಿದರು.
’ಕಟೌಟ್ ಬದಲಾವಣೆ ಮಾಡಲು ಚಿತ್ರಮಂದಿರದಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಆದರೆ, ಆ ಕೆಲಸವನ್ನು ಸೆಕ್ಯುರಿಟಿ ಸಿಬ್ಬಂದಿಗೆ ಮಾಡಲು ಹೇಳಿದವರು ಯಾರು? ಘಟನೆಗೆ ಯಾರ ನಿರ್ಲಕ್ಷ್ಯ ಕಾರಣ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹಿರಿಯ ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.