ಬೆಂಗಳೂರು: ‘ಮೃತ ವ್ಯಕ್ತಿಗಳ ಅಂತ್ಯಕ್ರಿಯೆಯ ಅಸ್ಥಿ ವಿಸರ್ಜನೆಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ಅಸ್ಥಿ ವಿಸರ್ಜನೆಗೆ ಅನುಕೂಲವಾಗುವ ನಿಯಮಗಳನ್ನು ರೂಪಿಸಿ ಅವಕಾಶ ಕಲ್ಪಿಸಬೇಕು’ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪದಾಧಿಕಾರಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್.ಎನ್. ದೀಕ್ಷಿತ್, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.
‘ಸನಾತನ ಹಿಂದೂ ಧರ್ಮದಲ್ಲಿ ದಹನ ಕ್ರಿಯೆಗೆ ಒಳಪಡುವ ಜನಾಂಗಗಳಲ್ಲಿ ವ್ಯಕ್ತಿಯು ಮೃತನಾದರೆ ಉತ್ತರ ಕ್ರಿಯಾದಿಗಳನ್ನು ಮಾಡಬೇಕು. ದಹನ ಕ್ರಿಯೆ ನಡೆಸಿ ಅಸ್ಥಿಯನ್ನು ಪುಣ್ಯ ನದಿಯಾದ ಕಾವೇರಿಯಲ್ಲಿ ವಿಸರ್ಜನೆ ಮಾಡಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆಗೆ ಸ್ಥಳೀಯರು ತಡೆಯೊಡ್ಡುತ್ತಿದ್ದಾರೆ. ಜೊತೆಗೆ, ಅಲ್ಲಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಇದರಿಂದ ಮೃತರ ಕುಟುಂಬದವರಿಗೆ ನೋವಾಗುತ್ತಿದೆ’ ಎಂದೂ ತಿಳಿಸಿದ್ದಾರೆ.
‘ಮೃತ ವ್ಯಕ್ತಿಯ ಕುಟುಂಬಸ್ಥರ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ಬೆಲೆ ಕೊಟ್ಟು ಅಸ್ಥಿ ವಿಸರ್ಜನೆಗೆ ವಾಹನದಲ್ಲಿ ಹೋಗಿಬರಲು ಅವಕಾಶ ಕಲ್ಪಿಸಬೇಕು’ ಎಂದೂ ಅವರು ವಿನಂತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.