ADVERTISEMENT

ಬೆಂಗಳೂರು | ತರಕಾರಿ ಜೊತೆ ತಂಬಾಕು ಉತ್ಪನ್ನ ಮಾರಾಟ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 15:29 IST
Last Updated 27 ಫೆಬ್ರುವರಿ 2024, 15:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ತರಕಾರಿ ಮೂಟೆಗಳಲ್ಲಿ ತಂಬಾಕು ಉತ್ಪನ್ನವನ್ನು ಮುಚ್ಚಿಟ್ಟು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಜ್ಞಾನಭಾರತಿಯ ತಿಪ್ಪೇಸ್ವಾಮಿ (35) ಹಾಗೂ ಫಾರೂಕ್ (40) ಬಂಧಿತರು. ಆರೋಪಿಗಳಿಂದ ₹10 ಲಕ್ಷ ಮೌಲ್ಯದ ತಂಬಾಕು ಉತ್ಪನ್ನ ಪೊಟ್ಟಣಗಳು ಹಾಗೂ ಲಾರಿ ಜಪ್ತಿ ಮಾಡಲಾಗಿದೆ. ಆದರೆ, ಈ ತಂಬಾಕು ಉತ್ಪನ್ನ ನಕಲಿ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ತರಕಾರಿ ಮೂಟೆಗಳಲ್ಲಿ ತಂಬಾಕು ಉತ್ಪನ್ನ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಫೆ. 23ರಂದು ರಾತ್ರಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಹೊರಟಿದ್ದ ಲಾರಿ ತಡೆದು ಪರಿಶೀಲಿಸಲಾಯಿತು. ಲಾರಿಯಲ್ಲಿ ತರಕಾರಿ ಮೂಟೆಗಳಿದ್ದವು. ಅವುಗಳನ್ನು ಬಿಚ್ಚಿ ನೋಡಿದಾಗ, ತರಕಾರಿಗಳ ನಡುವೆ ತಂಬಾಕು ಉತ್ಪನ್ನದ ಪೊಟ್ಟಣಗಳಿದ್ದವು.’

‘ಮೂಟೆಗಳಲ್ಲಿ ಪೊಟ್ಟಣಗಳನ್ನು ಸಾಗಿಸಿ ಅಂಗಡಿಗಳಿಗೆ ತಲುಪಿಸಲಾಗುತ್ತಿತ್ತು. ಅದೇ ತಂಬಾಕು ಉತ್ಪನ್ನವನ್ನು ಅಂಗಡಿಯವರು ಗ್ರಾಹಕರಿಗೆ ಮಾರುತ್ತಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.