ADVERTISEMENT

ಸರಣಿ ಅಪಘಾತ: ಬೈಕ್ ಸವಾರರಿಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 20:38 IST
Last Updated 17 ಜನವರಿ 2023, 20:38 IST

ಬೆಂಗಳೂರು: ಮಾಗಡಿ ರಸ್ತೆಯ ಅಂಜನಾನಗರದಲ್ಲಿ ಸೋಮವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಮಾಗಡಿ ನಿವಾಸಿ ರವಿಕುಮಾರ್ ಯಾದವ್ (28) ಹಾಗೂ ಸುಮನಹಳ್ಳಿಯ ವಿಕಾಸ್ (20) ಮೃತರು. ಅಪಘಾತದಲ್ಲಿ ಭವಾನಿ ಸಿಂಗ್ (39) ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಅಪಘಾತಕ್ಕೆ ಕಾರಣ ಎನ್ನಲಾದ ಕ್ಯಾಂಟರ್ ಚಾಲಕ ಸೈಯದ್ ಜಮೀರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಬಂಧಿಸಿ ಕ್ಯಾಂಟರ್ ಜಪ್ತಿ ಮಾಡಲಾಗಿದೆ’ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.

ADVERTISEMENT

‘ರವಿಕುಮಾರ್ ಹಾಗೂ ವಿಕಾಸ್ ಇಬ್ಬರೂ ಪಲ್ಸರ್‌ ಬೈಕ್‌ನಲ್ಲಿ ಬ್ಯಾಡರಹಳ್ಳಿ ಕಡೆಯಿಂದ ಸುಂಕದಕಟ್ಟೆ ಕಡೆಗೆ ಹೊರಟಿದ್ದರು. ಅಂಜನಾನಗರ ಬಳಿ ಅವರ ಬೈಕ್‌ ಮುಂದೆ ಭವಾನಿ ಸಿಂಗ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.

‘ಇದೇ ಮಾರ್ಗದಲ್ಲಿ ಚಾಲಕ ಸೈಯದ್ ಜಮೀರ್, ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಕ್ಯಾಂಟರ್ ಚಲಾಯಿಸಿಕೊಂಡು ಹೊರಟಿದ್ದರು. ಎದುರಿಗೆ ಹೊರಟಿದ್ದ ಪಲ್ಸರ್‌ ಬೈಕ್‌ಗೆ ಕ್ಯಾಂಟರ್‌ ಗುದ್ದಿತ್ತು. ನಂತರ, ಪಲ್ಸರ್ ಬೈಕ್ ಎದುರಿಗಿದ್ದ ಭವಾನಿ ಸಿಂಗ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸರು ಹೇಳಿದರು.

‘ಅಪಘಾತದಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ರವಿಕುಮಾರ್ ಹಾಗೂ ವಿಕಾಸ್ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಸದ್ಯ ಸೈಯದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕ್ಯಾಂಟರ್ ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.