ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಒದಗಿಸಿ: ಸಚಿವ ಬಿ.ಸಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ (ಕುಳಿತಿರುವವರು ಎಡದಿಂದ) ರವಿರಾಜ್ ಅವಸ್ಥಿ, ನೇತ್ರಾ ಮೇಟಿ, ಮಾಲಾಶ್ರೀ ಎಂ.ವಿ, ಶ್ರೀದೇವಿ ಬಿ.ವಿ, ಬಿಂದುಮಣಿ ಆರ್.ಎನ್ ಮತ್ತು ಡಿ.ಸೂರಜ್‌ ಅವರನ್ನು ಗೌರವಿಸಲಾಯಿತು. (ನಿಂತಿರುವವರು ಎಡದಿಂದ) ಅಸ್ತ್ರ ಸಾಫ್ಟ್‌ನ ಪ್ರವೀಣ್‌ ಶ್ರೀವತ್ಸ, ಪಿ.ಸಿ. ಶ್ರೀನಿವಾಸ್, ಜಿಕೆವಿಕೆ ವಿಶ್ರಾಂತ ಕುಲಪತಿ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಚಿವ ಬಿ.ಸಿ ನಾಗೇಶ್, 'ಇಂಡಿಯಾ ಫಾರ್ ಐಎಎಸ್ ಅಕಾಡೆಮಿ' ಆಡಳಿತ ಮಂಡಳಿ ಅಧ್ಯಕ್ಷ ಸಿ‌‌.ಎಸ್. ‌ಕೇದಾರ್‌, ಸಹ ಸಂಸ್ಥಾಪಕ ನವೀನ್ ಇದ್ದಾರೆ -ಪ್ರಜಾವಾಣಿ ಚಿತ್ರ
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ (ಕುಳಿತಿರುವವರು ಎಡದಿಂದ) ರವಿರಾಜ್ ಅವಸ್ಥಿ, ನೇತ್ರಾ ಮೇಟಿ, ಮಾಲಾಶ್ರೀ ಎಂ.ವಿ, ಶ್ರೀದೇವಿ ಬಿ.ವಿ, ಬಿಂದುಮಣಿ ಆರ್.ಎನ್ ಮತ್ತು ಡಿ.ಸೂರಜ್‌ ಅವರನ್ನು ಗೌರವಿಸಲಾಯಿತು. (ನಿಂತಿರುವವರು ಎಡದಿಂದ) ಅಸ್ತ್ರ ಸಾಫ್ಟ್‌ನ ಪ್ರವೀಣ್‌ ಶ್ರೀವತ್ಸ, ಪಿ.ಸಿ. ಶ್ರೀನಿವಾಸ್, ಜಿಕೆವಿಕೆ ವಿಶ್ರಾಂತ ಕುಲಪತಿ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಚಿವ ಬಿ.ಸಿ ನಾಗೇಶ್, 'ಇಂಡಿಯಾ ಫಾರ್ ಐಎಎಸ್ ಅಕಾಡೆಮಿ' ಆಡಳಿತ ಮಂಡಳಿ ಅಧ್ಯಕ್ಷ ಸಿ‌‌.ಎಸ್. ‌ಕೇದಾರ್‌, ಸಹ ಸಂಸ್ಥಾಪಕ ನವೀನ್ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪರಿಶಿಷ್ಟರು, ಹಿಂದುಳಿದವರು ಸೇರಿದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

‘ಇಂಡಿಯಾ ಫಾರ್‌ ಐಎಎಸ್‌’ ಅಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ರಾಜ್ಯದ 33 ಸಾಧಕರನ್ನು ಸನ್ಮಾನಿಸಿ ಶನಿವಾರ ಮಾತನಾಡಿದರು. ಕಾರ್ಯಕ್ರಮದಲ್ಲಿಕೃತಕ ಬುದ್ಧಿಮತ್ತೆಯ ‘ಮಾರ್ಗದರ್ಶಿ’ ತಂತ್ರಾಂಶ ಬಿಡುಗಡೆ ಮಾಡಲಾಯಿತು.

‘ತಾನು ಐಎಎಸ್‌, ಐಪಿಎಸ್‌ ಅಧಿಕಾರಿ ಎಂಬ ಅಹಂ ಯಾರಲ್ಲೂ ಇರಬಾರದು. ಜನಸಾಮಾನ್ಯರ ದೂರುಗಳಿಗೆ ಕಿವಿಯಾಗಬೇಕು. ಸಮಾಜದ ಒಳಿತಿಗಾಗಿ ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸುವ ಹಾಗೂ ಪಾಲಿಸುವ ವ್ಯವಧಾನ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ಪ್ರಭಾವಿಗಳು ನೇರವಾಗಿ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಅಧಿಕಾರಿಗಳನ್ನು ಕಂಡರೆ ಬಡವರು ಹಾಗೂ ಅನಕ್ಷರಸ್ಥರು ಭಯ ಬೀಳುವ ಪರಿಸ್ಥಿತಿ ಇದೆ. ಅಂತಹವರ ಸೇವೆಗೆ ಕಟಿಬದ್ಧರಾಗಬೇಕು’ ಎಂದರು.

ಇಂಡಿಯಾ ಫಾರ್‌ ಐಎಎಸ್ ಅಕಾಡೆಮಿ ಸಂಸ್ಥಾಪಕ ಶ್ರೀನಿವಾಸ್‌ ‘ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತರಬೇತಿ ನೀಡಬೇಕೆಂಬುದು ಸಂಸ್ಥೆಯ ಗುರಿ. ನಾಲ್ಕು ವರ್ಷಗಳ ಹಿಂದೆ ರಾಜ್ಯದ ಅಭ್ಯರ್ಥಿಗಳು ತರಬೇತಿಗಾಗಿ ನವದೆಹಲಿ, ಉತ್ತರಾಖಂಡಕ್ಕೆ ಹೋಗಬೇಕಿತ್ತು. ಲಕ್ಷಾಂತರ ಹಣ ಪಾವತಿಸಲಾಗದೆ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌ ಕನಸನ್ನೇ ಕೈಚೆಲ್ಲುತ್ತಿದ್ದರು. ಅಂತಹ ವಿದ್ಯಾರ್ಥಿಗಳ ಕನಸನ್ನು ಪೋಷಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.