ADVERTISEMENT

ಹೆಡಗೇವಾರ್‌ ಭಾಷಣ ಸೇರ್ಪಡೆ: ಎಸ್‌ಎಫ್ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 18:21 IST
Last Updated 17 ಮೇ 2022, 18:21 IST

ಬೆಂಗಳೂರು: ರಾಜ್ಯ ಸರ್ಕಾರವು ಎಸ್ಸೆಸ್ಸೆಲ್ಸಿ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣ ಹಾಗೂ ಕೋಮುವಾದಿ ಅಂಶ ಸೇರ್ಪಡೆ ಮಾಡಿದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ರಾಜ್ಯ ಸರ್ಕಾರ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಕ್ರಮವನ್ನು ವಿರೋಧಿಸಿದರು.‌

‘ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರಿಗೆ ಸಂಬಂಧಪಟ್ಟ ಹಾಗೂ ಪ್ರಗತಿಪರ ಚಿಂತನೆಗೆ ಪೂರಕವಾಗಿದ್ದ ಪಾಠಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ಸಂಘ ಪರಿವಾರದ ಸಂಸ್ಥಾಪಕ ಹೆಡಗೇವಾರ್‌ ಅವರ ಭಾಷಣ ಸೇರ್ಪಡೆ ಮಾಡುವ ಮೂಲಕ ಸರ್ಕಾರವು ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ. ವಸಾಹತುಶಾಹಿಯನ್ನು ಪ್ರತಿಪಾದಿಸಿದ ಬ್ರಿಟಿಷರ ಜೊತೆ ಸಾವರ್ಕರ್‌ ರಾಜಿಯಾಗಿದ್ದರು. ಬಿಜೆಪಿಯು ಅವರ ಸಂತತಿ. ಹೀಗಾಗಿಯೇ ದೇಶಪ್ರೇಮಿ ಭಗತ್‌ ಸಿಂಗ್‌ ಕುರಿತಾದ ಪಾಠವನ್ನು ಪಠ್ಯದಿಂದ ಕೈಬಿಟ್ಟಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಹೆಡಗೇವಾರ್‌ ಅವರ ಸಾರ್ವಜನಿಕ ಭಾಷಣವನ್ನು ಒಳಗೊಂಡ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಪಾಠದಲ್ಲಿ ಆರ್‌ಎಸ್‌ಎಸ್‌ ಕಾರ್ಯವಿಧಾನ, ಭಗವಧ್ವಜ ಗೌರವಿಸುವ ಕುರಿತ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಆ ಮೂಲಕ ಕೇಸರಿ ಧ್ವಜವೇ ರಾಷ್ಟ್ರಧ್ವಜ ಎಂಬ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.

‘ಹೆಡಗೇವಾರ್‌ ಅವರು ಸಂಘಪರಿವಾರಕ್ಕಷ್ಟೇ ಆದರ್ಶ ಪುರುಷ. ನಾಡಿನಲ್ಲಿ ಅನೇಕ ವಿದ್ವಾಂಸರಿದ್ದಾರೆ. ಅವರನ್ನು ಬಿಟ್ಟು ಹೆಡಗೇವಾರ್‌ ಅವರ ಭಾಷಣವನ್ನೇ ಪಠ್ಯದಲ್ಲಿ ಸೇರಿಸುವುದರ ಔಚಿತ್ಯವೇನು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.