ಬೆಂಗಳೂರು:‘ಸಾಹಿತ್ಯದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಾರೆ ಎಂಬ ಮಾತಿತ್ತು. ಆದರೆ, ಐಟಿ–ಬಿಟಿ ಉದ್ಯೋಗಿಗಳು ಸಹ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ವಿದೇಶದಲ್ಲಿರುವವರು ಪುಸ್ತಕ ತರಿಸಿಕೊಂಡು ಓದುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ’ ಎಂದುಇತಿಹಾಸತಜ್ಞ ಷ.ಶೆಟ್ಟರ್ ತಿಳಿಸಿದರು.
ಇತಿಹಾಸ ದರ್ಪಣ ಪ್ರಕಾಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದಿನ ಕಾಲದಲ್ಲಿ ಸಂಶೋಧನಾ ಗ್ರಂಥಗಳು ಒಂದು ಪ್ರತಿ ಮುದ್ರಣವಾಗುತ್ತಿತ್ತು. ಆದರೆ, ಈಗ ಸಂಶೋಧನಾ ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಣವಾಗುತ್ತಿವೆ’ ಎಂದರು.
ಎಸ್.ಕೆ.ಅರುಣಿ ಅವರ ‘ಬೆಂಗಳೂರು ಪರಂಪರೆ’ ಹಾಗೂ ಆರ್.ಮೋಹನ್ ರಚಿಸಿರುವ ‘ಕರ್ನಾಟಕದ ಆದಿಮ ಕಲೆ’ ಕೃತಿಗಳನ್ನುಶೆಟ್ಟರ್ ಬಿಡುಗಡೆಗೊಳಿಸಿದರು.
ವಿಶೇಷ ಸಂಚಿಕೆಯನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಉಪಾಧ್ಯಕ್ಷ ಎಂ.ಜಿ.ನಾಗರಾಜ ಬಿಡುಗಡೆ ಮಾಡಿದರು. ಓದುಗರ ಅನುಕೂಲಕ್ಕಾಗಿ ಸಿದ್ಧಪಡಿಸಿರುವ ‘ಇತಿಹಾಸ ದರ್ಪಣ’ ವೆಬ್ಸೈಟ್ ಅನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಪಿ.ವಿಜಯ್ ಉದ್ಘಾಟಿಸಿದರು.
ಪತ್ರಿಕೆಯ ಸಂಪಾದಕ ಹಂ.ಗು.ರಮೇಶ್ ಮಾತನಾಡಿ, ‘ಈ ವೆಬ್ಸೈಟ್ನಲ್ಲಿ ನಮ್ಮ ಸಂಸ್ಥೆಯ ಎಲ್ಲ ಆವೃತ್ತಿಯ ಪ್ರತಿಗಳು ಲಭ್ಯ ಇವೆ. ಆನ್ಲೈನ್ ಮೂಲಕ ಪ್ರಕಾಶನದ ಪುಸ್ತಕಗಳನ್ನು ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಓದುಗರು ವೆಬ್ಸೈಟ್ ಮೂಲಕ ಚಂದಾದಾರರಾಗಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.