ಪೀಣ್ಯ ದಾಸರಹಳ್ಳಿ: ‘ಮಹಿಳೆಯರಿಗೆ ಎಲ್ಲ ಉದ್ಯೋಗಗಳಲ್ಲಿ ಮೀಸಲಾತಿ ನೀಡಿದರೆ ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಾರೆ. ಕೇಂದ್ರ ಸರ್ಕಾರದ ಯಾವುದೇ ಉದ್ಯೋಗಗಳಲ್ಲಿ ಮಹಿಳೆ ಯರಿಗೆ ಸಮರ್ಪಕವಾಗಿ ಮೀಸಲಾತಿ ಸಿಕ್ಕಿಲ್ಲ’ ಎಂದು ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಿಕ್ಷಕರ ವೇದಿಕೆ ಹಾಗೂ ಆದ್ಯ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಶಿಕ್ಷಕರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತ್ತೀಚೆಗೆ ರಾಜ್ಯ ಸರ್ಕಾರ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಿರಬಹುದು.ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನೀಡಿದ್ದೆ. ಆದರೆ, ಮಹಿಳೆಯರಿಗೆ ಸ್ಥಾನಮಾನ ನೀಡಿದರೆ ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಶಕ್ತಿ ಪ್ರದರ್ಶಿಸುತ್ತಾರೆ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದರು.
‘ವಿರೋಧಪಕ್ಷದ ನಾಯಕ ನಾಗಿದ್ದಾಗ ವಿದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ರಾಯಭಾರಿ ಕಚೇರಿಯ ವಾಹನ ಚಾಲನೆ ಮಾಡಿದ್ದು ಮಹಿಳೆ. ಈ ರೀತಿ ಎಲ್ಲ ಉದ್ಯೋಗ ಗಳಲ್ಲೂ ಮಹಿಳೆಯರಿಗೆ ಸಮಾನ ಮೀಸಲಾತಿ ನೀಡಬೇಕು. ಶಿಕ್ಷಕಿಯರ ವರ್ಗಾವಣೆ ವಿಚಾರವಾಗಿ ಮುಖ್ಯಮಂತ್ರಿಯಾಗಿ ಅಂದು ನಾನು ಹೊರಡಿಸಿದ್ದ ಆದೇಶಕ್ಕೂ ಬೆಲೆ ನೀಡದೆ, ಕೆಲ ಹಿರಿಯ ಅಧಿಕಾರಿಗಳು ಭ್ರಷ್ಟಾಚಾರ ಮಾಡಲು ಮುಂದಾಗಿದ್ದರು. ಅವರನ್ನು ತಕ್ಷಣವೇ ಕೆಲಸದಿಂದ ಅಮಾನತು ಮಾಡಿದ್ದೆ’ ಎಂದರು.
ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ‘ರಾಜಕಾರಣಿಗಳು ತಪ್ಪು ಮಾಡಿದರೆ, ಇದು ರಾಜಕೀಯದಲ್ಲಿ ಸರ್ವೇಸಾಮಾನ್ಯ ಎಂದು ಜನ ನಿರ್ಲಕ್ಷ್ಯ ತೋರುತ್ತಾರೆ. ಆದರೆ, ಶಿಕ್ಷಕರು ತಪ್ಪು ಮಾಡಿದಾಗ ಇಡೀ ಸಮಾಜವೇ ಒಂದು ಕ್ಷಣ ಬೆರಗಾಗುತ್ತದೆ. ಏಕೆಂದರೆ, ಶಿಕ್ಷಕರು ಪ್ರತಿಯೊಬ್ಬರ ತಪ್ಪನ್ನು ತಿದ್ದುವ ಸ್ಥಾನದಲ್ಲಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮೂರು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.