ADVERTISEMENT

ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಬೇಡಿ: ಶಿವರಾಜ ತಂಗಡಗಿ

ಒನಕೆ ಓಬವ್ವ ಜಯಂತಿ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮನವಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 16:15 IST
Last Updated 11 ನವೆಂಬರ್ 2025, 16:15 IST
ಸಮಾರಂಭದಲ್ಲಿ (ಎಡದಿಂದ) ಕೆ.ಎಂ.ಗಾಯಿತ್ರಿ, ಸಾವಿತ್ರಿ ಮುಜುಂದಾರ, ಬಸವರಮಾನಂದ ಸ್ವಾಮೀಜಿ, ಶಿವರಾಜ ತಂಗಡಗಿ ಮತ್ತು ಕೆ.ಮಾನಸ ಅವರು ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
-ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ (ಎಡದಿಂದ) ಕೆ.ಎಂ.ಗಾಯಿತ್ರಿ, ಸಾವಿತ್ರಿ ಮುಜುಂದಾರ, ಬಸವರಮಾನಂದ ಸ್ವಾಮೀಜಿ, ಶಿವರಾಜ ತಂಗಡಗಿ ಮತ್ತು ಕೆ.ಮಾನಸ ಅವರು ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ ಮಹಾಪುರುಷರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಬಾರದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಸಮಾರಂಭದಲ್ಲಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು.

‘ಕನಕದಾಸರನ್ನು ಕುರುಬ ಸಮುದಾಯಕ್ಕೆ, ವಾಲ್ಮೀಕಿಯವರನ್ನು ನಾಯಕ ಸಮುದಾಯಕ್ಕೆ, ಅಂಬೇಡ್ಕರ್‌ ಅವರನ್ನು ದಲಿತ ಸಮುದಾಯಕ್ಕೆ ಸೀಮಿತಗೊಳಿಸಲಾಗುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಎಲ್ಲರಿಗೂ ಸೇರಿದವರಾಗಿದ್ದಾರೆ. ಯಾವುದೇ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಒನಕೆ ಓಬವ್ವ ಅವರು ತೋರಿದ ಶೌರ್ಯ, ಸಾಹಸ ಮತ್ತು ಸಮಯ ಪ್ರಜ್ಞೆಯನ್ನು ಎಲ್ಲ ಮಹಿಳೆಯರು ಅಳವಡಿಸಿಕೊಳ್ಳುವ ಅಗತ್ಯ ಇದೆ. ಅವರು ಮಡಿದ ದಿನವನ್ನು ಮಹಿಳಾ ಯೋಧರ ದಿನಾಚರಣೆಯಾಗಿ ಆಚರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆಗೆ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಒನಕೆ ಓಬವ್ವ ಅವರ ಬಗ್ಗೆ ಉಪನ್ಯಾಸ ನೀಡಿದ ಲೇಖಕಿ ಸಾವಿತ್ರಿ ಮುಜುಂದಾರ, ‘ಓಬವ್ವ ಅವರು ಕುಟುಂಬ ಮತ್ತು ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು. ದುಡಿಯುವ ಮಹಿಳೆಯ ಪ್ರತಿನಿಧಿಯಾಗಿ ಅವರು ಕಾಣುತ್ತಾರೆ. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ‘ನಾಗರಹಾವು’ ಚಿತ್ರದ ‘ಕನ್ನಡ ನಾಡಿನ ವೀರರಮಣಿಯ…’ ಹಾಡಿನ ಕೊನೆಯಲ್ಲಿ ಓಬವ್ವ ಸಾಯುವುದನ್ನು ತೋರಿಸಿದ್ದಾರೆ. ಅಧ್ಯಯನಗಳ ಪ್ರಕಾರ ಅವರು ಆ ದಾಳಿಯ ನಂತರವೂ ಮೂರು ವರ್ಷ ಬದುಕಿದ್ದರು. ಅವರ ಪಾರ್ಥಿವ ಶರೀರವನ್ನು ರಾಜ್ಯದ ತುಂಬೆಲ್ಲ ಮೆರವಣಿಗೆ ಮಾಡಿದ್ದರು. ಸಿನಿಮಾದಲ್ಲಿ ತಪ್ಪಾಗಿ ತೋರಿಸಲಾಗಿದೆ. ಅವರ ಬಗ್ಗೆ ಸಂಶೋಧನೆ ನಡೆಯಬೇಕು’ ಎಂದರು.

ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಕೆ.ಮಾನಸ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ, ಅಶೋಕ್ ಛಲವಾದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.