ADVERTISEMENT

ಬೆಂಗಳೂರು: ಕಡಬಗೆರೆ ಬಳಿ ಶೂಟೌಟ್, ಉದ್ಯಮಿ ಪುತ್ರನ ಅಪಹರಣಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 5:05 IST
Last Updated 17 ಸೆಪ್ಟೆಂಬರ್ 2019, 5:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಉದ್ಯಮಿ ಸಿದ್ದರಾಜು ಅವರ ಮಗ ಮತ್ತು ಕಾರು ಚಾಲಕನನ್ನು ಅಪಹರಿಸಿ₹ 1.80 ಕೋಟಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳ ಕಾಲಿಗೆ ನಗರದ ಹೊರವಲಯದ ಕಡಬಗೆರೆ ಬಳಿ ಪೊಲೀಸರು ಗುಂಡು ಹೊಡೆದಿದ್ದಾರೆ.

ಅಪಹರಣಕಾರಸಂಗುಬಾಳ ಪ್ರಶಾಂತ್, ಸತೀಶ್ ಎಂಬುವವರ ಬಂಧನಕ್ಕೆವಿಶೇಷ ತಂಡ ರಚನೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡುಹಾರಿಸಿದ್ದಾರೆ. ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಸತ್ಯನಾರಾಯಣ್ ಅವರು ಗುಂಡು ಹೊಡೆದಿದ್ದಾರೆ.

ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಸತ್ಯನಾರಾಯಣ್, ರಾಜಾನುಕುಂಟೆ ಪಿಎಸ್ಐ ಮುರಳೀಧರ್, ಆನೇಕಲ್ ಪಿಎಸ್ಐ ಹೇಮಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಘಟನೆಯಲ್ಲಿ ಹೇಮಂತ್, ಮುರಳೀಧರ್, ದೊಡ್ಡಬಳ್ಳಾಪುರ ಹೆಡ್ ಕಾನ್ಸ್‌ಟೆಬಲ್ ಮಧು ಅವರಿಗೂ ಗಾಯಗಳಾಗಿವೆ.ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯಮಿ ಸಿದ್ದರಾಜು ಅವರ ಮಗ, ಹೇಮಂತ (17) ಮತ್ತು ಚಾಲಕ ಕೇಶವ (24) ಇತ್ತೀಚೆಗೆ ನಾಪತ್ತೆಯಾಗಿದ್ದರು.ರಾಜಾನುಕುಂಟೆ ಬಳಿಯ ಆರ್.ಟಿ. ನಗರ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಪಿ.ಯು ಓದುತ್ತಿದ್ದ ಹೇಮಂತನನ್ನುಚಾಲಕ ಕೇಶವ ಅವರು ಟ್ಯೂಷನ್‌ಗೆಂದು ಸಂಜೆ ವೇಳೆ ಕಾರಿನಲ್ಲಿ ಮನೆಯಿಂದ ಕರೆದುಕೊಂಡು ತೆರಳಿದ್ದರು. ಇದಾದ ಕೆಲ ಹೊತ್ತಿನಲ್ಲೇ ಇಬ್ಬರ ಮೊಬೈಲ್‌ಗಳೂ ಸ್ವಿಚ್‌ ಆಫ್ ಆಗಿದ್ದವು. ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು.

ಸಿದ್ದರಾಜು ಅವರು ಎರಡು ಬೈಕ್ ಶೋರೂಂ ಮತ್ತು ಉದ್ದಿಮೆ ನಡೆಸುತ್ತಿದ್ದರು. 15 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಚಾಲಕ ಕೇಶವನ ಮೇಲೆ‌ ಅನುಮಾನ ವ್ಯಕ್ತಪಡಿಸಿದ್ದರು. ಯಲಹಂಕಾದ ಅಮೃತಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಚಾಲಕ ಗೌರಿಬಿದನೂರಿನವನು.

ಡಿವೈಎಸ್‌ಪಿ ಮೋಹನ್ ನೇತೃತ್ವದಲ್ಲಿ ಐದು ತಂಡಗಳ ರಚನೆ ಮಾಡಲಾಗಿತ್ತು. ಹತ್ತು ದಿನಗಳಿಂದ ದೇಶದ ವಿವಿಧ ಮೂಲೆಗಳಿಂದ ಕರೆ ಮಾಡಿ ಆರೋಪಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಪ್ರಯಫಜನವಾಗಿರಲಿಲ್ಲ. ಕೊನೆಗೆ ₹ 1.80 ಕೋಟಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಹಣ ತೆಗೆದುಕೊಳ್ಳಲು ಬರುವಂತೆ ಹೇಳಿ ಆರೋಪಿಗಳನ್ನು ಕರೆಸಿಕೊಳ್ಳಲಾಗಿದೆ. ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.