ADVERTISEMENT

ಮೈತ್ರಿ ಸರ್ಕಾರದಲ್ಲಿ ಈ ರೀತಿ ಹೇಳಿಕೆ ಸಲ್ಲ: ಜಿಟಿಡಿ ಹೇಳಿಕೆಗೆ ದಿನೇಶ್‌ ಅಸಮಧಾನ

​ಪ್ರಜಾವಾಣಿ ವಾರ್ತೆ
Published 1 ಮೇ 2019, 12:51 IST
Last Updated 1 ಮೇ 2019, 12:51 IST
   

ಬೆಂಗಳೂರು:'ಮೈಸೂರು- ಕೊಡಗು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗಲಿದೆಎಂದು ಜಿ.ಟಿ ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ, ಮೈತ್ರಿ ಸರ್ಕಾರದಲ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.

‘ಮಂಡ್ಯದಲ್ಲೂ ಮೊದಲೇ ಎಲ್ಲರನ್ನೂ ಕರೆಸಿ ಮಾತನಾಡಬೇಕಿತ್ತು. ಆಗ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಅಂತ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 80ರಷ್ಟು ಈಗ ಸರಿಯಾಗಿದೆ.ಆದರೆ, ಶೇ 100ಕ್ಕೆ ನೂರು ಸರಿಯಾಗಿದ್ದಿದ್ದರೆ ರಾಜ್ಯದಲ್ಲಿ 24–28 ಸೀಟು ಗೆಲ್ಲುವ ಅವಕಾಶ ಇರುತ್ತಿತ್ತು’ ಎಂದು ಹೇಳಿದರು.

‘ಬಹಳ ದಿನಗಳ ಹಿಂದೆಯೇಮೈತ್ರಿ ಮಾಡಿ ಕೊಳ್ಳಲಾಗಿತ್ತು.‌ ಮೈಸೂರು ಕೂಡ ನಮಗೆ ಅಂತಾ ಹಿಂದೆಯೇ ತೀರ್ಮಾನ ಆಗಿತ್ತು.‌ ಮೈತ್ರಿ ಸರ್ಕಾರ ಇರುವಾಗ ಅವರು ಈ ರೀತಿ ಹೇಳಿಕೆ ಕೊಡೋದು ಸರಿಯಲ್ಲ.‌ ಜವಾಬ್ದಾರಿ ತೆಗೆದುಕೊಂಡುಪ್ರಾಮಾಣಿಕವಾಗಿ ಕೆಲಸ ಮಾಡಿದಿದ್ದರೆ ಈ ರೀತಿ ಆಗುತ್ತಿರಲಿಲ್ಲ.‌ ಅವರ ಹೇಳಿಕೆ ನೋಡಿದರೆ ಎಲ್ಲೋ ಒಂದು ಕಡೆ ಪ್ರಾಮಾಣಿಕತೆಯಿಂದ ಕೆಲಸ ಆಗಿಲ್ಲ ಅಂತಾ ಕಾಣುತ್ತದೆ’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿಯವರು ಬೀಗುತ್ತಿದ್ದಾರೆ.‌ ಯಡಿಯೂರಪ್ಪ ಕನಸು ‌ನನಸಾಗುವುದಿಲ್ಲ. ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿದ್ದಾರೆ. ಆದರೆ, ಅವರ ಸಾಧನೆ ಯಶಸ್ವಿ ಆಗುವುದಿಲ್ಲ. ಬಿಜೆಪಿಯ ಕೀಳು ಮಟ್ಟದ ರಾಜಕಾರಣ ಅಂತ್ಯವಾಗಲಿದೆ’ ಎಂದು ಬಿಜೆಪಿ ನಾಯಕರ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.‘ರಾಹುಲ್ ಗಾಂಧಿ ಪೌರತ್ವ ಪ್ರಶ್ನೆ ಮಾಡುವ ನೀಚ ರಾಜಕಾರಣ ಅವರದ್ದು. ಕರ್ನಾಟಕಕ್ಕೆ ನೆಮ್ಮದಿ ಕೊಡುವ ಫಲಿತಾಂಶ ಈ ಚುನಾವಣೆಯಿಂದ ತಿಳಿಯಲಿದೆ. ಬಿಜೆಪಿಯ ಕೆಟ್ಟ ರಾಜಕಾರಣ ಕೊನೆಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.