ADVERTISEMENT

‘ಕಾಯ್ದೆ ತಿದ್ದುಪಡಿ ಮಾಡಿ ಕೋರ್ಟ್‌ ಮುಂದೆ ನಿಲ್ಲಬೇಕಾ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 20:11 IST
Last Updated 29 ಮಾರ್ಚ್ 2023, 20:11 IST
ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಕಂದಾಯ ಸಚಿವ ಆರ್.ಅಶೋಕ ನಿವಾಸದ ಎದುರು ಸಂತ್ರಸ್ತರು ಬುಧವಾರ ಪ್ರತಿಭಟನೆ ನಡೆಸಿದರು
ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಕಂದಾಯ ಸಚಿವ ಆರ್.ಅಶೋಕ ನಿವಾಸದ ಎದುರು ಸಂತ್ರಸ್ತರು ಬುಧವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ(ಪಿಟಿಸಿಎಲ್‌) ತಿದ್ದುಪಡಿ
ತಂದು ನಾನು ಸುಪ್ರೀಂ ಕೋರ್ಟ್‌ ಮುಂದೆ ನಿಲ್ಲಬೇಕಾ’ ಎಂದು ಕಂದಾಯ ಸಚಿವ ಆರ್.ಅಶೋಕ ಹೋರಾಟಗಾರರನ್ನು ಪ್ರಶ್ನಿಸಿದರು.

ಕಾಯ್ದೆಯ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು, ಬುಧವಾರ
ಆರ್.ಅಶೋಕ ನಿವಾಸದ ಎದುರು ಧರಣಿ ನಡೆಸಿದರು.

ಮನವಿ ಆಲಿಸಿದ ಬಳಿಕ ಮಾತನಾಡಿದ ಅವರು, ‘ಈ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಸರ್ಕಾರ ಕಾಲಮಿತಿ ನಿಗದಿ ಮಾಡಿಲ್ಲ. ನಿಗದಿ ಮಾಡಲು ಸುಪ್ರೀಂ ಕೋರ್ಟ್‌ ತಿಳಿಸಿದ್ದು, ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು. ನಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದರೆ ಏನು ಪ್ರಯೋಜನ’ ಎಂದರು.

ADVERTISEMENT

‘ಕಾಯ್ದೆಯಲ್ಲಿ ಕಾಲಮಿತಿ ಇಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಆದರೂ ನಾವು ಕಾಲಮಿತಿ ನಿಗದಿ ಮಾಡಿಲ್ಲ. ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಸುಪ್ರೀಂ ಕೋರ್ಟ್‌ ವಕೀಲರನ್ನು ಕೇಳಿದ್ದೇನೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಕಾಯ್ದೆಗೆ ತಿದ್ದಪಡಿ ತರಲು ಆಗುವುದಿಲ್ಲ ಎಂಬ ಅಭಿಪ್ರಾಯ ಬಂದಿದೆ’ ಎಂದು ಅವರು ತಿಳಿಸಿದರು.

‘ತಿದ್ದುಪಡಿಗೆ ಅವಕಾಶ ಇದೆ ಎಂಬುದನ್ನು ಕಾನೂನು ಇಲಾಖೆಯೇ ತಿಳಿಸಿದೆ. ಒಂದೂವರೆ ತಿಂಗಳಿಂದ ನಿಮ್ಮ ಕಚೇರಿಯಲ್ಲೇ ಕಡತ ಉಳಿದಿದೆ’ ಎಂದು ಪಿಟಿಸಿಎಲ್ ಹೋರಾಟಗಾರ ಮಂಜುನಾಥ್ ಮನವರಿಕೆ ಮಾಡಿಸಲು ಪ್ರಯತ್ನಿಸಿದರು.

‘ಚುನಾವಣೆ ಪ್ರಕಟವಾಗಿರುವುದರಿಂದ ಸದ್ಯಕ್ಕೆ ಏನೂ ಮಾಡಲು ಆಗುವುದಿಲ್ಲ’ ಎಂದು ಪ್ರತಿಕ್ರಿಯಿಸಿ ಸಚಿವರು ತೆರಳಿದರು.

‘ಸ್ವಾತಂತ್ರ್ಯ ಉದ್ಯಾನದಲ್ಲಿ 87 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಯಾರೊಬ್ಬರೂ ತಿರುಗಿ ನೋಡಿಲ್ಲ. ಆದ್ದರಿಂದ ಕಂದಾಯ ಸಚಿವರ ಮನೆ ಮುಂದೆ ಬಂದಿದ್ದೇವೆ. ಸಚಿವರು ಉಡಾಫೆಯಿಂದ ಉತ್ತರ ನೀಡಿದ್ದಾರೆ. ಸರ್ಕಾರ ಕಣ್ಣೊರೆಸುವ ತಂತ್ರವನ್ನೇ ಮಾಡಿಕೊಂಡು ಕಾಲ ತಳ್ಳಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ಮಂಜುನಾಥ್ ಮಾಧ್ಯಮಗಳಿಗೆ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.