ಬೆಂಗಳೂರು: ಅನರ್ಹಗೊಂಡಿರುವ ಶಾಸಕ ಕೆ. ಸುಧಾಕರ್ ಅವರ ಮನೆ ಬಳಿ ಇದ್ದ ಶ್ರೀಗಂಧ ಮರವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಈ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸದಾಶಿವ ನಗರದ 17ನೇ ಕ್ರಾಸ್ನಲ್ಲಿರುವ ಸುಧಾಕರ್ ಅವರ ಮನೆ ಮತ್ತು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ರಸ್ತೆ ಬದಿ ಶ್ರೀಗಂಧ ಮರ ಇತ್ತು. ದುಷ್ಕರ್ಮಿಗಳು ರಾತ್ರಿ ವೇಳೆ ಮರವನ್ನು ಕೊಯ್ದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದು, ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಸದಾಶಿವ ನಗರದಲ್ಲಿರುವ ಐಐಎಸ್ಸಿ ಮತ್ತು ನ್ಯಾಯಾಧೀಶರೊಬ್ಬರ ಮನೆಯ ಆವರಣದಲ್ಲಿದ್ದ ಶ್ರೀಗಂಧ ಮರಗಳನ್ನು ಇತ್ತೀಚೆಗೆ ಕಳವು ಮಾಡಲಾಗಿತ್ತು. ಅದೇ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.