
ಬೆಂಗಳೂರು: ಡ್ರಿಪ್ಸ್ ತೆಗೆಯುವ ಸಂದರ್ಭದಲ್ಲಿ ನರ್ಸ್ವೊಬ್ಬರು ಆರು ತಿಂಗಳ ಮಗುವಿನ ಎಡಗೈನ ಬೆರಳು ಕತ್ತರಿಸಿದ್ದು, ಈ ಸಂಬಂಧ ಸಿಎಂಎಚ್ ಆಸ್ಪತ್ರೆಯ ನರ್ಸ್ ಅನಿತಾ, ವೈದ್ಯೆ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಉದಯನಗರ ನಿವಾಸಿ ವಿಜಯ್ ಕುಮಾರ್ ಅವರ ಪುತ್ರ ಬಾಲಕುಮಾರ್ನ ಎಡಗೈನ ಕೊನೆಯ ಬೆರಳು ತುಂಡಾಗಿದೆ. ಈ ಸಂಬಂಧ ವಿಜಯ್ ಕುಮಾರ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಅನಿತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಫೆ.24ರಂದು ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
‘ಆರು ತಿಂಗಳ ಮಗು ಬಾಲಕುಮಾರ್ಗೆ ಶೀತ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಫೆ.19ರಂದು ಸಿಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ತಜ್ಞೆ ಮೀನಾಕ್ಷಿ ಚಿಕಿತ್ಸೆ ನೀಡುತ್ತಿದ್ದರು. ಫೆ.24ರಂದು ಮಗುವನ್ನು ಡಿಸ್ಚಾರ್ಜ್ ಮಾಡಲು ಮೀನಾಕ್ಷಿ ಅವರು ನರ್ಸ್ಗೆ ಸೂಚಿಸಿದ್ದರು. ನರ್ಸ್ ಅನಿತಾ ಅವರು ಮಗುವಿಗೆ ಹಾಕಿದ್ದ ಡ್ರಿಪ್ಸ್ ತೆಗೆಯುವ ಸಂದರ್ಭದಲ್ಲಿ ಎಡಗೈನ ಕೊನೆಯ ಬೆರಳನ್ನು ಕತ್ತರಿಸಿದ್ದಾರೆ. ಅದರಿಂದ ಮಗುವಿಗೆ ತೀವ್ರ ನೋವು ಹಾಗೂ ಗಾಯವಾಗಿದೆ. ತಕ್ಷಣ ಆಸ್ಪತ್ರೆಯ ವೈದ್ಯರು ಡ್ರೆಸಿಂಗ್ ಮಾಡಿ, ಪ್ಲಾಸ್ಟರ್ ಮಾಡಿದ್ದರು’ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
‘ಮಗುವಿಗೆ ದೊಡ್ಡ ಗಾಯವಾಗಿಲ್ಲ. ಮಗುವಿಗೆ ಚಿಕ್ಕ ವಯಸ್ಸು. ಬೇಗ ಗುಣವಾಗುತ್ತದೆ’ ಎಂದು ಆಸ್ಪತ್ರೆಯವರು ಭರವಸೆ ನೀಡಿದ್ದರು. ಆದರೆ, ನಿರ್ಲಕ್ಷ್ಯ ವಹಿಸಿದ್ದ ನರ್ಸ್, ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ವಿಜಯ್ ದೂರು ನೀಡಿದ್ದರು. ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.