ADVERTISEMENT

ಜಮೀನು ಖರೀದಿ ನಿಯಮ ಸಡಿಲ: ಟಿ.ಎಂ.ವಿಜಯಭಾಸ್ಕರ್

ಸ್ಮಾರ್ಟ್ ಸಿಟಿ ಹೂಡಿಕೆದಾರರ ಸಮ್ಮೇಳನದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:19 IST
Last Updated 5 ಫೆಬ್ರುವರಿ 2020, 19:19 IST
ಸಮ್ಮೇಳನಕ್ಕೆ ಟಿ.ಎಂ.ವಿಜಯಭಾಸ್ಕರ್ ಚಾಲನೆ ನೀಡಿದರು. ಅಂಜುಂ ಪರ್ವೇಜ್, ಸಿಸ್ಕೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಡೈಸಿ ಚಿಟ್ಟಿಲಾಪಿಲ್ಲಿ, ಸ್ಮಾರ್ಟ್‌ ಸಿಟಿ ಅಭಿಯಾನದ ರಾಜ್ಯ ನಿರ್ದೇಶಕಿ ಚಾರುಲತಾ ಸೊಮಲ್‌ ಇದ್ದಾರೆ  –ಪ್ರಜಾವಾಣಿ ಚಿತ್ರ
ಸಮ್ಮೇಳನಕ್ಕೆ ಟಿ.ಎಂ.ವಿಜಯಭಾಸ್ಕರ್ ಚಾಲನೆ ನೀಡಿದರು. ಅಂಜುಂ ಪರ್ವೇಜ್, ಸಿಸ್ಕೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಡೈಸಿ ಚಿಟ್ಟಿಲಾಪಿಲ್ಲಿ, ಸ್ಮಾರ್ಟ್‌ ಸಿಟಿ ಅಭಿಯಾನದ ರಾಜ್ಯ ನಿರ್ದೇಶಕಿ ಚಾರುಲತಾ ಸೊಮಲ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಉದ್ಯಮ ಸ್ಥಾಪನೆಗೆ ಕೃಷಿ ಜಮೀನು ಖರೀದಿಸಲು ಇದ್ದ ನಿಯಮಗಳನ್ನು ಸರಳಗೊಳಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಬುಧವಾರ ತಿಳಿಸಿದರು.

ರಾಜ್ಯದ 7 ಸ್ಮಾರ್ಟ್ ಸಿಟಿಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ವಿವಿಧ ಕಂಪನಿ, ಸಂಸ್ಥೆಗಳಿಗೆ ತಿಳಿಸುವ ಸಲುವಾಗಿ ಹಮ್ಮಿಕೊಂಡಿದ್ದ ‘ಸ್ಮಾರ್ಟ್‌ ಸಿಟಿ ಹೂಡಿಕೆದಾರರ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ನಗರ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎಲ್ಲಾ ವಲಯಗಳೂ ಅಭಿವೃದ್ಧಿ ಕಾಣುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದೇವೆ. ಮೂಲಸೌಕರ್ಯ ಕಲ್ಪಿಸಲು ಒತ್ತುನೀಡಿದ್ದು, ಮುಂದಿನ ವರ್ಷಗಳಲ್ಲಿ 250 ಕಿ.ಮೀ ಮೆಟ್ರೊ ರೈಲು ಮಾರ್ಗ ಪೂರ್ಣಗೊಳ್ಳಲಿದೆ. ಉಪನಗರ ರೈಲ್ವೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದ್ದು, ಕಾರ್ಯರೂಪಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆಗೂ ಪರಿಹಾರ ಸಿಗಲಿದೆ ಎಂದು ವಿವರಿಸಿದರು.

ADVERTISEMENT

ದೇವನಹಳ್ಳಿ ಬಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ರನ್‌ವೇ ಮಾರ್ಚ್ ತಿಂಗಳ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ. ಮತ್ತೊಂದು ಟರ್ಮಿನಲ್ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದ್ದು, ಇದರಿಂದ ವಿಮಾನ ಪ್ರಯಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಮಾತನಾಡಿ, ‘ನಗರಗಳ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಮೂಲಸೌಕರ್ಯ ಕಲ್ಪಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ನೀರು, ವಿದ್ಯುತ್, ರಸ್ತೆ, ಒಳಚರಂಡಿ, ವಸತಿ ಕಲ್ಪಿಸುವುದರ ಜತೆಗೆ ಉತ್ತಮ ಶಿಕ್ಷಣ ಸಿಗುವಂತೆಮಾಡಿ, ನಿರುದ್ಯೋಗ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ. ಬಡತನದಿಂದ ಮೇಲೆ ತರುವ ಪ್ರಯತ್ನ ನಡೆಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾರ್ವಜನಿಕ ಖಾಸಗಿ ಸಹಭಾಗಿತ್ವ’ದ ಮೂಲಕ ನಗರದ ಅಭಿವೃದ್ಧಿಗೆ ಒತ್ತುನೀಡಲಾಗಿದೆ. ಖಾಸಗಿ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ ಬಂಡವಾಳ ತೊಡಗಿಸಲು ಉದ್ಯಮಿಗಳಿಗೆ ಇದ್ದ ತೊಡಕುಗಳನ್ನು ನಿವಾರಣೆ ಮಾಡಿದ್ದು, ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.