ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಹೇಳುತ್ತಿದ್ದು, ಇದರ ಜಾರಿಗೆ ದಕ್ಷಿಣ ವಿಭಾಗದ ಪೊಲೀಸರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ವಿಭಾಗದ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿರುವ ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳ ಅಂಗಡಿ ಎದುರು ವೃತ್ತಗಳನ್ನು ಹಾಕಲಾಗುತ್ತಿದೆ. ವೃತ್ತದಿಂದ ವೃತ್ತಕ್ಕೆ ಮೂರು ಅಡಿಯಷ್ಟು ಅಂತರವಿದೆ.
ಯಾರೇ ಸಾರ್ವಜನಿಕರು ಅಂಗಡಿಗಳಿಗೆ ಬಂದರೆ ವೃತ್ತದಲ್ಲೇ ನಿಲ್ಲಬೇಕು. ಸಾಲಾಗಿ ನಿಂತುಕೊಂಡು ಅಂಗಡಿಯೊಳಗೆ ಹೋಗಿ ವಸ್ತುಗಳನ್ನು ಖರೀದಿಸಬೇಕು.
ಆಯಾ ಠಾಣೆ ಪೊಲೀಸರೇ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ ವೃತ್ತಗಳನ್ನು ಹಾಕಿಸುತ್ತಿದ್ದಾರೆ. ಆಕಸ್ಮಾತ್, ಮಳೆ ಬಂದು ವೃತ್ತ ಅಳಿಸಿ ಹೋದರೆ ಪುನಃ ವೃತ್ತ ಕೊರೆಯುವಂತೆಯೂ ಸೂಚಿಸುತ್ತಿದ್ದಾರೆ.
ಅಂಗಡಿ, ಮಳಿಗೆಗಳು, ಹಾಲಿನ ಕೇಂದ್ರಗಳು, ಹಣ್ಣು, ತರಕಾರಿ ಮಳಿಗೆ... ಹೀಗೆ ಪ್ರತಿ ಮಳಿಗೆಯಲ್ಲೂ ಸಾರ್ವಜನಿಕರು ಮೂರು ಅಡಿ ದೂರದಲ್ಲೇ ನಿಲ್ಲುತ್ತಿದ್ದಾರೆ.
‘ಇದೊಂದು ಒಳ್ಳೆಯ ಕೆಲಸ. ಸೋಂಕು ತಗುಲಿದ ವ್ಯಕ್ತಿಗಳು ಯಾರಾದರೂ ಬಂದರೂ ಬೇರೆಯವರಿಗೆ ತೊಂದರೆ ಆಗುವುದಿಲ್ಲ’ ಎಂದು ನಿವಾಸಿ ವಿರೇಶ್ ಹೇಳಿದರು.
ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪೆಟ್, 'ಯಾವುದೇ ಭಯಬೇಡ. ಎಲ್ಲರಿಗೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳೋಣ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.