ಬೆಂಗಳೂರು: ಬಾಲಕನೊಬ್ಬನನ್ನು ಯುವಕರ ಗುಂಪು ಸಂಪಂಗಿ ಕೆರೆಯಲ್ಲಿ ಬಲವಂತವಾಗಿ ಮುಳುಗಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕ ಹರ್ಷವರ್ಧನ್ ಎಂಬಾತನನ್ನು ಆರೋಪಿಗಳು ಕೆರೆಯಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದು, ಆರೋಪಿತರ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ.
‘ಬಂಧಿತ ಎಲ್ಲ ನಾಲ್ವರು ಬಾಲಾಪರಾಧಿಗಳಾಗಿದ್ದು, ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಅಲ್ಲದೆ, ಕೆಟ್ಟ ಚಟಗಳಿಗೆ ಬಲಿಯಾಗಿದ್ದಾರೆ. ಅವರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಹರ್ಷವರ್ಧನ್ ಎಂಬ ಬಾಲಕ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನ.10ರಂದು ಸಂಜೆ ಹರ್ಷವರ್ಧನ್ನನ್ನು ಸಂಪಂಗಿ ಕೆರೆಗೆ ಕರೆದುಕೊಂಡು ಹೋದ ಆರೋಪಿತರು, ಈಜಾಡುವಂತೆ ಬಲವಂತವಾಗಿ ಮುಳುಗಿಸಿದ್ದಾರೆ.
‘ಈಜಲು ಬರಲ್ಲ ಅಣ್ಣ, ದಯವಿಟ್ಟು ಹೊರಗೆ ಕರೆದುಕೊಂಡು ಹೋಗಿ’ ಎಂದು ಬಾಲಕ ಮನವಿ ಮಾಡಿದರೂ ಬಿಡದ ಆರೋಪಿತರು, ಕಾಲು ಹಿಡಿದುಕೊಂಡು ಕೆರೆಯಲ್ಲಿ ಮುಳುಗಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಈ ಸಂಬಂಧ ಬಾಲಕನ ಸಂಬಂಧಿ ನೀಡಿ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.