ಬೆಂಗಳೂರು: ಪ್ರೀತಿಗಾಗಿ ಕಿತ್ತಾಡಿಕೊಂಡ ಯುವಕರಿಬ್ಬರಿಂದ ಹಲ್ಲೆಗೀಡಾಗಿ ಕೋಮಾದಲ್ಲಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇದೇ7ರಂದು ಯುವತಿ ಮೇಲೆ ಹಲ್ಲೆ ನಡೆದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದ ಯುವತಿ ಪ್ರಜ್ಞೆ ಕಳೆದುಕೊಂಡಿದ್ದರು. ಅವರನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಗಿದ್ದ ಯುವತಿ, ಸ್ನೇಹಿತ ಬಬಿತ್ ಎಂಬಾತನ ಜೊತೆ ಹೆಚ್ಚು ಮಾತನಾಡುತ್ತಿದ್ದರು. ಕೆಲ ದಿನಗಳ ನಂತರ ರಾಹುಲ್ ಎಂಬಾತನ ಪರಿಚಯವಾಗಿ, ಆತನ ಜೊತೆಯೂ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು’ ಎಂದು ಸೋಲದೇವನಹಳ್ಳಿ ಪೊಲೀಸರು ಹೇಳಿದರು.
‘ಜೂನ್ 7ರಂದು ಯುವತಿ ರಾಹುಲ್ ಮನೆಗೆ ಹೋಗಿದ್ದರು. ಅದು ಗೊತ್ತಾಗುತ್ತಿದ್ದಂತೆ ಬಬಿತ್, ಅದೇ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಮೂವರ ನಡುವೆ ಮಾರಾಮಾರಿ ನಡೆದಿತ್ತು.’
‘ಯುವತಿಯನ್ನೇ ಬೈದು ಹಲ್ಲೆ ಮಾಡಿದ್ದರಾಹುಲ್, ಮನೆಯಿಂದ ಹೊರಟು ಹೋಗಿದ್ದ. ಆನಂತರ ಯುವತಿ, ಬಬಿತ್ ಜತೆ ಆತನ ಮನೆಗೆ ಹೋಗಿದ್ದರು. ಅಲ್ಲಿಯೂ ಯುವತಿ ಹಾಗೂ ಬಬಿತ್ ನಡುವೆ ಗಲಾಟೆ ಮುಂದುವರಿದಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಬಬಿತ್, ಯುವತಿ ತಲೆಗೆ ಹೆಲ್ಮೆಟ್ನಿಂದ ಹೊಡೆದಿದ್ದ. ಬಳಿಕ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆರೋಪಿ ಬಬಿತ್ನೇ ಯುವತಿಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಪೋಷಕರೇ ಸ್ಥಳಕ್ಕೆ ಬಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದೂ ಪೊಲೀಸರು ಹೇಳಿದರು.
‘ಘಟನೆ ನಡೆದಾಗಿನಿಂದಲೂ ಯುವತಿ ಕೋಮಾದಲ್ಲಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಿಗ್ಗೆ 9ರ ಸುಮಾರಿಗೆ ಅಸುನೀಗಿದ್ದಾರೆ. ಆರೋಪಿಗಳಾದ ಬಬಿತ್ ಹಾಗೂ ರಾಹುಲ್ನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.