ಬೆಂಗಳೂರು: ‘ಡೇರಿ ಉತ್ಪನ್ನಗಳ ದರವನ್ನು ಆಗಸ್ಟ್ನಲ್ಲಿ ಶೇಕಡ 4ರಷ್ಟು ಹೆಚ್ಚಿಸಲಾಗುವುದು’ ಎಂದು ಭಾರತೀಯ ಡೇರಿ ಸಂಘದ ಅಧ್ಯಕ್ಷ ಅಧ್ಯಕ್ಷ ಆರ್.ಎಸ್. ಸೋಧಿ ಹೇಳಿದರು.
ಭಾರತೀಯ ಡೇರಿ ಸಂಘದ ದಕ್ಷಿಣ ವಲಯ ಆಯೋಜಿಸಿರುವ ‘ದಕ್ಷಿಣ ಡೇರಿ ಶೃಂಗ’ಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಪ್ಲಾಸ್ಟಿಕ್ ಕವರ್ಗಳಲ್ಲಿ ಹಾಲು, ಅದರ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಡೇರಿ ಉದ್ಯಮಕ್ಕೆ ಯಶಸ್ಸು ಸಿಕ್ಕಿದೆ. ಕಡಿಮೆ ವೆಚ್ಚದಲ್ಲಿ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ. 2024ರಲ್ಲಿ ಹಾಲಿನ ಉತ್ಪಾದನೆ ಶೇ 3.5ರಷ್ಟು ಹೆಚ್ಚಳವಾಗಿದೆ’ ಎಂದು ಎಂದರು.
‘ಭಾರತದಲ್ಲಿ ಚಿಕ್ಕ ಗಾತ್ರದ ಡೇರಿ ಘಟಕ ಸ್ಥಾಪಿಸಬೇಕು. ಇಲ್ಲಿ ಹಾಲಿನ ಸಂಸ್ಕರಣೆ, ಪ್ಯಾಕೇಜಿಂಗ್ ಹಾಗೂ ವಿವಿಧ ಉತ್ಪನ್ನಗಳ ತಯಾರಿಕೆ ಮಾಡಬೇಕು. ಗ್ರಾಹಕರು ಇಂದು ತಾಜಾ, ನೈಸರ್ಗಿಕ ಹಾಗೂ ಶುದ್ಧ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಪೂರೈಕೆ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ರಾಮ್ ಪಿ. ಅನೇಜಾ ಮಾತನಾಡಿ, ‘ಹಾಲು ದೇಶದಲ್ಲಿ ಸುರಕ್ಷಿತ ಹಾಗೂ ಕಡಿಮೆ ಬೆಲೆಗೆ ಸಿಗುವ ಆಹಾರ ಉತ್ಪನ್ನವಾಗಿದೆ. ಆದ್ದರಿಂದ ನಮ್ಮ ಜನ ಹಾಲು ಮತ್ತು ಅದರ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ದಕ್ಷಿಣ ವಲಯದ ಸ್ಥಳೀಯ ಬ್ರ್ಯಾಂಡ್ಗಳನ್ನು ಉಳಿಸಿ, ಬೆಳೆಸಬೇಕು’ ಎಂದರು.
ಎಬಿಎಲ್ಇ ಅಧ್ಯಕ್ಷ ಜಿ.ಎಸ್. ಕೃಷ್ಣನ್, ದೊಡ್ಲ ಡೇರಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ವಿ.ಕೆ. ರೆಡ್ಡಿ, ಭಾರತೀಯ ಡೇರಿ ಸಂಘದ ದಕ್ಷಿಣ ವಲಯದ ಅಧ್ಯಕ್ಷ ಸತೀಶ್ ಕುಲಕರ್ಣಿ, ಕಾರ್ಯದರ್ಶಿ ಕೆ.ಎಸ್. ರಾಮಚಂದ್ರ, ಎಸ್. ಸುಭಾಷ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.