ಬೆಂಗಳೂರು: ಮೆಟ್ರೊ, ಜಲಮಂಡಳಿ, ವಿದ್ಯುತ್ ಸರಬರಾಜು ಕಂಪನಿಯಂತೆ ನಗರದಲ್ಲಿ ರಸ್ತೆಗಳ ಬೃಹತ್ ಕಾಮಗಾರಿಗಳಿಗಾಗಿ ಪ್ರತ್ಯೇಕ ವಿಶೇಷ ಉದ್ದೇಶದ ವಾಹಕ (ಎಸ್ಪಿವಿ) ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್ಗಳಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಎಸ್ಪಿವಿ ಸ್ಥಾಪಿಸಲು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ. ಎಸ್ಪಿವಿ ರಚನೆಯಿಂದ ಬಿಬಿಎಂಪಿಯ ಮೂಲ ಜವಾಬ್ದಾರಿ ಕಡಿಮೆಯಾಗಲಿದ್ದು, ನಾಗರಿಕರಿಂದ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
ಬೆಂಗಳೂರು ಸ್ಮಾರ್ಟ್ ಮೊಬಿಲಿಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಎಸ್ಎಂಐಎಲ್) ಅಥವಾ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಎಸ್ಐಎಲ್) ಎಂದು ಹೊಸ ಎಸ್ಪಿವಿಗೆ ಹೆಸರಿಡುವ ಸಾಧ್ಯತೆ ಇದೆ. ಇದನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸುವ ಬಜೆಟ್ನಲ್ಲಿ ಪ್ರಕಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಮುಂಬೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಎಂಎಂಆರ್ಡಿಎ) ಮಾದರಿಯಲ್ಲಿ ಈ ಎಸ್ಪಿವಿ ಕಾರ್ಯನಿರ್ವಹಿಸಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ₹ 40 ಸಾವಿರ ಕೋಟಿ ವೆಚ್ಚದ ಎರಡು ಸುರಂಗ ರಸ್ತೆಗಳು, ಡಬಲ್ ಡೆಕರ್ ಯೋಜನೆ, ಸ್ಕೈಡೆಕ್, 1,700 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್, ಎಲಿವೇಟೆಡ್ ಕಾರಿಡಾರ್ಗಳು ಸೇರಿದಂತೆ ₹ 1 ಲಕ್ಷ ಕೋಟಿ ವೆಚ್ಚದ ಯೋಜನೆಗಳನ್ನು ಈ ವರ್ಷದ ಆರಂಭದಲ್ಲಿ ಪ್ರಕಟಿಸಿದ್ದರು. ಈ ಯೋಜನೆಗಳನ್ನು ಹೊಸ ಎಸ್ಪಿವಿಗೆ ಹಸ್ತಾಂತರಿಸಲು ಉಪ ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಬಿಬಿಎಂಪಿಯ ಅಧಿಕಾರವನ್ನು ಮೊಟಕುಗೊಳಿಸಿ ಹಲವು ಸಣ್ಣ ನಗರಪಾಲಿಕೆಗಳನ್ನು ಸೃಷ್ಟಿಸಲು ಸರ್ಕಾರ ನಿರ್ಧರಿಸಿದೆ.
‘ಬೆಂಗಳೂರಿನಲ್ಲಿ ಮುಂದಿನ 20–30 ವರ್ಷಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಭಿವೃದ್ಧಿಗಾಗಿ ನಾವು ಹಲವು ಯೋಜನೆಗಳನ್ನು ಹೊಂದಿದ್ದೇವೆ. ಬೃಹತ್ ಯೋಜನೆಗಳನ್ನು ನಿರ್ವಹಿಸಲು ಹೊಸ ಎಸ್ಪಿವಿ ಸ್ಥಾಪನೆಯ ಪ್ರಸ್ತಾವ ಇದೆ. ಇದರ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.