ADVERTISEMENT

ಕಳ್ಳತನಕ್ಕೆ ಬಂದನೆಂದು ಹೊಡೆದು ಕೊಂದರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 22:07 IST
Last Updated 5 ಜೂನ್ 2020, 22:07 IST

ಬೆಂಗಳೂರು: ಶ್ರೀರಾಮಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜಗನ್‌ (23) ಎಂಬುವರ ಕೊಲೆ ಸಂಬಂಧ ಮಾಗಡಿ ರಸ್ತೆಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಆರು ಭದ್ರತಾ ಸಿಬ್ಬಂದಿಯನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಮಪುರ ನಿವಾಸಿಯಾದ ಜಗನ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಅವರ ಕೊಲೆ ಸಂಬಂಧ ಸ್ನೇಹಿತರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತಾಪ್ಸು ಬರ್ಮನ್, ಜಯರಾಮ್, ದೀಪಕ್‌ ಬೋರಾ, ಜೋಯ್ ದೀಪ್, ನಾರಾಯಣ ಹಾಗೂ ಧನಂಜಯ ಬಂಧಿತರು. ಕಳ್ಳತನಕ್ಕೆ ಬಂದಿದ್ದರೆಂದು ತಿಳಿದು ಜಗನ್‌ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮೇ 31ರಂದು ರಾತ್ರಿ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಜಗನ್‌ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಬೂಟಗಾಲಿನಿಂದ ಒದ್ದು ಪೈಪ್‌ನಿಂದ ಹೊಡೆದಿದ್ದರು. ಸ್ಥಳಕ್ಕೆ ಬಂದಿದ್ದ ವ್ಯವಸ್ಥಾಪಕ, ಜಗನ್ ಅವರನ್ನು ಬಿಡಿಸಿ ಕಳುಹಿಸಿದ್ದರು.’

ADVERTISEMENT

‘ತೀವ್ರ ಗಾಯಗೊಂಡಿದ್ದ ಜಗನ್ ಮನೆಗೆ ಹೋಗುವ ಮಾರ್ಗದಲ್ಲೇ ಕುಸಿದು ಬಿದ್ದಿದ್ದರು. ಅದನ್ನು ಗಮನಿಸಿದ್ದ ಸ್ನೇಹಿತರು ಮನೆಗೆ ಕರೆದೊಯ್ದು ನೀರು ಕುಡಿಸಿ ಕಳುಹಿಸಿದ್ದರು. ಜೂನ್ 1ರಂದು ಸಂಜೆ 6 ಗಂಟೆಯಲ್ಲಿ ಮೃತಪಟ್ಟಿದ್ದರು. ಅವರ ಸಾವಿಗೆ ಭದ್ರತಾ ಸಿಬ್ಬಂದಿ ಕಾರಣವೆಂದು ಸ್ನೇಹಿತರು ಆರೋಪಿಸಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.