ADVERTISEMENT

ಬೆಂಗಳೂರು: ಕೋವಿಡ್‌ ದೃಢಪ್ರಮಾಣ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 4:08 IST
Last Updated 27 ಜುಲೈ 2021, 4:08 IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕು ಪ್ರಕರಣಗಳ ದೃಢಪ್ರಮಾಣ ಶೇ 0.6ರಿಂದ ಶೇ 1.4ಕ್ಕೆ ಏರಿಕೆಯಾಗಿದೆ.

‌ಸೋಮವಾರ 1,606 ಮಂದಿಗೆ ಸೋಂಕು ತಗುಲಿದ್ದು, 31 ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 1,937 ಮಂದಿ ಗುಣಮುಖರಾಗಿದ್ದಾರೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 32 ಸಾವಿರ (1.14 ಲಕ್ಷಕ್ಕೆ) ಕುಗ್ಗಿವೆ. ಹೊಸ ಪ್ರಕರಣಗಳು 605 ಜಾಸ್ತಿಯಾಗಿದ್ದು, ಸೋಂಕಿತರ ಸಾವು 9 ಹೆಚ್ಚಳವಾಗಿವೆ. ಮರಣ ಪ್ರಮಾಣ ದರ ಶೇ.2.2ರಷ್ಟಿದೆ.

ಕಳೆದ ವಾರ ಬಹುತೇಕ ದಿನ ಏರಿಕೆಯಾಗುತ್ತಲೇ ಇದ್ದ ಕೋವಿಡ್‌ ಹೊಸ ಪ್ರಕರಣಗಳು ಭಾನುವಾರ 1,001ಕ್ಕೆ ಇಳಿಕೆಯಾಗಿದ್ದವು. 30ರ ಆಸುಪಾಸಿನಲ್ಲಿದ್ದ ಸಾವಿನ ಸಂಖ್ಯೆ 22ಕ್ಕೆ ತಲುಪಿತ್ತು. ಆದರೆ, ಸೋಮವಾರ ಮತ್ತೆ ಒಂದೂವರೆ ಸಾವಿರಕ್ಕೆ ಹೆಚ್ಚಳವಾಗಿದೆ.

ADVERTISEMENT

ಇನ್ನು, ಮೊದಲ ಮತ್ತು ಎರಡನೇ ಅಲೆ ಸೇರಿ ಸೋಂಕಿತರ ಒಟ್ಟು ಸಂಖ್ಯೆ 28.89 ಲಕ್ಷ ದಾಟಿದ್ದು, ಈ ಪೈಕಿ 28.36 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 23,057ಕ್ಕೆ ಇಳಿಕೆಯಾಗಿವೆ. 36,405 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟಾರೆ ಗುಣಮುಖ ದರ ಶೇ.98 ರಷ್ಟಿದ್ದು, ಶೇ 1.1 ರಷ್ಟು ಮರಣ ದರವಿದೆ.

ಐದು ಜಿಲ್ಲೆಗಳಲ್ಲಿ ಶೂನ್ಯ:ಬಾಗಲಕೋಟೆ, ಬಳ್ಳಾರಿ, ಬೀದರ್, ಕೊಪ್ಪಳ, ಕಲಬುರ್ಗಿಯಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 467, ದಕ್ಷಿಣ ಕನ್ನಡ 357, ಮೈಸೂರು 162, ಉಡುಪಿ 78, ಬೆಳಗಾವಿ 69, ತುಮಕೂರು 59, ಚಾಮರಾಜನಗರ 54, ಹಾಸನ 57 ಹಾಗೂ ಶಿವಮೊಗ್ಗದಲ್ಲಿ 52 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 8 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ.

14 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯವಿದ್ದು, 16 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ವರದಿಯಾಗಿದೆ. ದಕ್ಷಿಣ ಕನ್ನಡ 4, ಬೆಂಗಳೂರು, ಹಾವೇರಿ, ಮೈಸೂರು ಹಾಗೂ ಉತ್ತರ ಕನ್ನಡದಲ್ಲಿ ತಲಾ ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.