ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಮತ್ತು ನಾಗರತ್ನಾ ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಪದ ಸಂಸ್ಥೆಯ ಅಶ್ವಿನಿ ದೇವರಾಜ್, ಪ್ರಧಾನ ಕಾರ್ಯದರ್ಶಿ ಪದ ದೇವರಾಜ್, ಸಿದ್ದನಗೌಡ ಪಾಟೀಲ, ಪ್ರೊ.ರಾಜಪ್ಪ ದಳವಾಯಿ, ಬಸವರಾಜ ಸಬರದ ಮತ್ತು ಅವಿರತ ಹರೀಶ್ ಉಪಸ್ಥಿತರಿದ್ದರು
– ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಅವರ ಬದುಕು, ಸಂಶೋಧನೆ ಹಾಗೂ ಹೋರಾಟವನ್ನು ಅವರ ಆಪ್ತರು, ಒಡನಾಡಿಗಳು ಮೆಲುಕು ಹಾಕಿದರು.
ನಗರದಲ್ಲಿ ‘ಪದ’ ಸಾಂಸ್ಕೃತಿಕ ಸಂಘಟನೆ ಏರ್ಪಡಿಸಿದ್ದ ‘ಬಂಜಗೆರೆ ಜಯಪ್ರಕಾಶ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ’ ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಬಹುತೇಕರು, ಬಂಜಗೆರೆ ಜಯಪ್ರಕಾಶ್ ಅವರ ಹೋರಾಟಗಳು, ಜೈಲುವಾಸ, ಬಂಡಾಯ ಸಾಹಿತ್ಯ, ಚಳವಳಿಯನ್ನು ನೆನಪಿಸಿಕೊಂಡರು.
ಅವರ ಬದುಕು–ಒಡನಾಟ ಹಾಗೂ ಸಂಶೋಧನೆ ಕುರಿತು ಗೋಷ್ಠಿಗಳು ನಡೆದವು. ಲೇಖಕರೊಂದಿಗೆ ಜಯಪ್ರಕಾಶ್ ಅವರು ಸಂವಾದ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಹಿಂದಿನ ತಲೆಮಾರು ಮತ್ತು ಹೊಸ ತಲೆಮಾರುಗಳ ಪರಸ್ಪರ ಭೇಟಿಯಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಚಲನಶೀಲತೆ ಬರುತ್ತದೆ. ಬಂಜಗೆರೆ ಅವರು ಹೋರಾಟ ಮತ್ತು ಸಾಹಿತ್ಯವನ್ನು ಒಂದುಗೂಡಿಸಿದ ವಿಧಾನ, ಎರಡರಲ್ಲೂ ಸಮಚಿತ್ತವನ್ನು ಉಳಿಸಿಕೊಂಡಿರುವುದು ವಿಶಿಷ್ಟವಾದ ಸಂಗತಿ’ ಎಂದು ಹೇಳಿದರು.
ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ಬಂಜಗೆರೆ 90ರ ದಶಕದಲ್ಲಿ ಕರ್ನಾಟಕ ಪ್ರತ್ಯೇಕ ರಾಷ್ಟ್ರ ಎಂದು ಗೋಡೆ ಬರಹ ಚಳವಳಿ ಮಾಡಿದ್ದರು. ಆಗ ಅಂತಹ ಅಲ್ಲೋಲ, ಕಲ್ಲೋಲಗಳೇನೂ ಆಗಲಿಲ್ಲ. ಅವರ ‘ಆನುದೇವ ಹೊರಗಣವನು’ ಭಾರಿ ಚರ್ಚೆಗೆ ಕಾರಣವಾಯಿತು ಮತ್ತು ಪ್ರತಿರೋಧ ಸಹ ಎದುರಿಸಿತ್ತು. ಆದರೆ, ಅವರ ಮೇಲೆ ಹಲ್ಲೆ ನಡೆಯಲಿಲ್ಲ. ಈಗ ಅಂತಹ ಮಾತುಗಳನ್ನು ಆಡಲು ಧೈರ್ಯ ಮಾಡುವುದಿರಲಿ, ಪ್ರಾಣಕ್ಕೂ ಮಾರಕವಾಗಬಹುದು ಎಂಬ ಆತಂಕದಲ್ಲಿ ಇದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರವನ್ನು ಸರ್ಕಾರ ಹತ್ತಿಕ್ಕುತ್ತಿದೆ. ಬುದ್ದಿಜೀವಿಗಳು, ಪತ್ರಕರ್ತರು ವಿಚಾರಣೆ ಇಲ್ಲದೆ ಜೈಲಿನಲ್ಲಿ ಕಳೆಯುತ್ತಿರುವ ಈ ಕಾಲದಲ್ಲಿ, ಬಂಜಗೆರೆ ಅವರತಹ ಚಿಂತಕರ ದಿಟ್ಟತನ ಮೆಚ್ಚಲೇಬೇಕು’ಎಂದು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಸಿದ್ದನಗೌಡ ಪಾಟೀಲ, ‘ಬಂಡಾಯ ಸಾಹಿತ್ಯ ಸಂಘಟನೆ ನಡೆದಾಗಿನಿಂದಲೂ ಜಯಪ್ರಕಾಶ್ ಅವರನ್ನು ನೋಡಿದ್ದೇನೆ. ಬೆಂಗಳೂರಿನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆ ವಿರೋಧಿಸಿ, ಹೋರಾಟ ಮಾಡಿದ ನಮ್ಮನ್ನು ಬಂಧಿಸಿದ್ದರು. ಅನಾರೋಗ್ಯ ಇದ್ದರೂ ಅವರು ಹೋರಾಟದಲ್ಲಿ ಭಾಗವಹಿಸಿದ್ದರು’ ಎಂದು ಹೇಳಿದರು.
ಇದೇ ವೇಳೆ ಬಂಜಗೆರೆ ಜಯಪ್ರಕಾಶ್ ಮತ್ತು ಪತ್ನಿ ನಾಗರತ್ನಾ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ರಂಗಕರ್ಮಿ ರಾಜಪ್ಪ ದಳವಾಯಿ, ಸಾಹಿತಿ ಬಸವರಾಜ ಸಬರದ ಮಾತನಾಡಿದರು. ಪದ ಸಂಘಟನೆಯ ಕಾರ್ಯದರ್ಶಿ ದೇವರಾಜ್, ಶಿವಲಿಂಗ ಪ್ರಸಾದ್ ನಿರೂಪಿಸಿದರು.
ಪರಿಪೂರ್ಣ ಹೋರಾಟಗಾರ ಸಾಹಿತಿ ಎಂಬ ಭ್ರಮೆ ನನಗೆ ಇಲ್ಲ. ಸಾಹಿತ್ಯ ಸಂಶೋಧನೆ ಹೋರಾಟ ನಡೆಯುತ್ತಲೇ ಇರುತ್ತದೆ. ನಾನು ಆಯ್ಕೆ ಮಾಡಿಕೊಂಡ ದಾರಿ ಬಗ್ಗೆ ತೃಪ್ತಿಯಿದೆ.ಬಂಜಗೆರೆ ಜಯಪ್ರಕಾಶ್ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.