ADVERTISEMENT

ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಿ: ಕರ್ನಾಟಕ ಮಹಿಳಾ ಸಂಘರ್ಷ ಸಮಿತಿ ಮನವಿ

ಮಹಿಳಾ ಆಯೋಗಕ್ಕೆ ಕರ್ನಾಟಕ ಮಹಿಳಾ ಸಂಘರ್ಷ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 19:47 IST
Last Updated 2 ಮೇ 2024, 19:47 IST
ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಪೂರ್ಣಿಮಾ ದಾಸ್ ಅವರು ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಪೂರ್ಣಿಮಾ ದಾಸ್ ಅವರು ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಿ, ಸಂತ್ರಸ್ತರ ಪೂರ್ಣ ವಿಡಿಯೊ ಬಿಡಿಗಡೆ ಮಾಡಿದ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಕರ್ನಾಟಕ ಮಹಿಳಾ ಸಂಘರ್ಷ ಸಮಿತಿ ಮನವಿ ಮಾಡಿದೆ. 

ನಗರದಲ್ಲಿ ಗುರುವಾರ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ ದಾಸ್ ಅವರು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಿದರು. 

‘ಈ ಪ್ರಕರಣ ಇಡೀ ಮನುಕುಲ ತಲೆ ತಗ್ಗಿಸುವಂತೆ ಮಾಡಿದ ಹೀನ ಕೃತ್ಯವಾಗಿದ್ದು, ಅದನ್ನು ಖಂಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ವ್ಯಕ್ತಿಗಳ ಮನಃಸ್ಥಿತಿ ಕೂಡ ಅತ್ಯಂತ ವಿಕೃತ ಮತ್ತು ಕ್ರೂರವಾದದ್ದಾಗಿದೆ. ಅಂತಹವರನ್ನು ತುರ್ತಾಗಿ ಬಂಧಿಸಬೇಕಿದೆ’ ಎಂದು ಪೂರ್ಣಿಮಾ ದಾಸ್ ತಿಳಿಸಿದ್ದಾರೆ. 

ADVERTISEMENT

‘ರೇವಣ್ಣ ಅವರ ಕುಟುಂಬದ ಕಾರು ಚಾಲಕ ಕಾರ್ತಿಕ್ ನೀಡಿರುವ ಹೇಳಿಕೆಯಿಂದ ಪೆನ್‌ಡ್ರೈವ್ ಮೂಲ ಆತನೇ ಎನ್ನುವುದು ಸಾಬೀತಾಗಿದೆ. ಇಷ್ಟಾದರೂ ಅಶ್ಲೀಲ ವಿಡಿಯೊಗಳ ಪೆನ್‌‌ಡ್ರೈವ್ ಮಾಡಿದವರು, ಹಂಚಿದವರು ಯಾರು ಎಂಬ ಬಗ್ಗೆ ತನಿಖೆ ಚುರುಕುಗೊಳಿಸದಿರುವುದು ವಿಷಾದನೀಯ. ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ವಿಚಾರಣೆಗೆ ಗುರಿಪಡಿಸಿ ಕ್ರಮ ಕೈಗೊಳ್ಳುವುದು ಎಷ್ಟು ಮುಖ್ಯವೋ, ಇದನ್ನು ಬೀದಿ ಬೀದಿಗಳಲ್ಲಿ ಹಂಚಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಅಷ್ಟೇ ಮುಖ್ಯ. ಹಾಗಾಗಿ, ಆಯೋಗವು ಹಾಸನ ಪೊಲೀಸ್ ಹಾಗೂ ಎಸ್.ಐ.ಟಿ.ಗೆ ಸ್ಪಷ್ಟ ಸೂಚನೆ ನೀಡಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.