ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿಗ್ರಹ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ರಾತ್ರೋ ರಾತ್ರಿ ಬುದ್ಧನ ವಿಗ್ರಹ ತಂದು ಪ್ರತಿಷ್ಠಾಪಿಸಿದ ಬಳಿಕ ಈಗ ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಸಮುದಾಯಗಳ ನೌಕರರ ಸಂಘಟನೆಗಳು ತಮ್ಮ ಸಮುದಾಯಗಳಿಗೆ ಸೇರಿದ ಮಹಾನ್ ವ್ಯಕ್ತಿಗಳ ವಿಗ್ರಹಗಳನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿವೆ.
ವಿಶ್ವವಿದ್ಯಾಲಯದಲ್ಲಿರುವ ಅಲ್ಪಸಂಖ್ಯಾತ, ಇತರ ಹಿಂದುಳಿದ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ನೌಕರರ ಸಂಘಟನೆಗಳು ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನಾಡಪ್ರಭು ಕೆಂಪೇಗೌಡ ಮತ್ತು ಮಹಾತ್ಮಗಾಂಧಿ ಪ್ರತಿಮೆಗಳನ್ನು ಸರಸ್ವತಿ ಮತ್ತು ಬುದ್ಧ ವಿಗ್ರಹದ ಪಕ್ಕದಲ್ಲೇ ಸ್ಥಾಪಿಸುವಂತೆ ಪಟ್ಟು ಹಿಡಿದಿವೆ ಎಂದು ಮೂಲಗಳು ತಿಳಿಸಿವೆ.
ಈ ಸಮಾಜ ಸುಧಾರಕರ ವಿಗ್ರಹಗಳು ಸರಸ್ವತಿ ಮತ್ತು ಬುದ್ಧ ವಿಗ್ರಹದಷ್ಟೇ ಗಾತ್ರ, ತೂಕ, ವೆಚ್ಚ ಮತ್ತು ಅದೇ ರೀತಿಯ ವಸ್ತುಗಳನ್ನು ಬಳಸಬೇಕು ಎಂದೂ ಆಗ್ರಹಿಸಿವೆ. ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯದ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಗ್ರಹಗಳ ಸ್ಥಾಪನೆಗೆ ಸೂಕ್ತ ನಿರ್ದೇಶನ ನೀಡಬೇಕು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಅವರು, ‘ಈ ಬಗ್ಗೆ ವೈಯಕ್ತಿಕವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಸ್ತಾವನೆಯನ್ನು ಸಿಂಡಿಕೇಟ್ ಮುಂದಿಡುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.