ರಸ್ತೆಯಲ್ಲಿ ಬೀದಿ ನಾಯಿಗಳು
ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹುಚ್ಚಾಟ, ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಆಗಾಗ್ಗೆ ಸಾವೂ ಸಂಭವಿಸುತ್ತಿರುವುದರಿಂದ ನಾಗರಿಕರು ಪ್ರಾಣ ಸಂಕಟದಲ್ಲಿದ್ದಾರೆ.
2023ರ ಅಕ್ಟೋಬರ್ 23ರಂದು ಪ್ರಕಟಿಸಿರುವ ಗಣತಿ ವರದಿ ಪ್ರಕಾರ, ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಶೇ 10ರಷ್ಟು ಕಡಿಮೆಯಾಗಿವೆ. ಶೇ 71.85ರಷ್ಟು ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ, ನಾಯಿ ಕಡಿತ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ.
ವಿಧಾನಸೌಧ, ವಿಕಾಸಸೌಧ, ಎಂ.ಜಿ. ರಸ್ತೆಯ ಮೆಯೊ ಹಾಲ್, ಲಾಲ್ಬಾಗ್, ಕಬ್ಬನ್ಪಾರ್ಕ್ ಸುತ್ತಮುತ್ತ ಸೇರಿದಂತೆ ನಗರದ ಹಲವು ಪ್ರದೇಶ, ಮೈದಾನ, ರಸ್ತೆಗಳಲ್ಲಿ ಕತ್ತಲಾದ ಮೇಲೆ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬರೇ ನಡೆದು ಹೋಗದಂತಹ ಪರಿಸ್ಥಿತಿ ಇದೆ. ವ್ಯಗ್ರ ಬೀದಿ ನಾಯಿಗಳ ಆಟಾಟೋಪಕ್ಕೆ ಮಕ್ಕಳು, ವೃದ್ಧರೂ ಸೇರಿದಂತೆ ಎಲ್ಲ ವಯೋಮಾನದ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಐದು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 15 ಸಾವಿರ ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ ಎಂದು ಬಿಬಿಎಂಪಿ ಅಂಕಿ–ಅಂಶಗಳು ಹೇಳುತ್ತಿವೆ. ಆದರೆ, 2025ರ ಜನವರಿಯಿಂದ ಜೂನ್ವರೆಗೇ 13 ಸಾವಿರಕ್ಕೂ ಹೆಚ್ಚು ಬೀದಿ ನಾಯಿ ಪ್ರಕರಣಗಳು ದಾಖಲಾಗಿವೆ. ಬ್ಯಾಟರಾಯನಪುರದ ಕೆಂಪೇಗೌಡ ನಗರದಲ್ಲಿ ಇತ್ತೀಚೆಗೆ ನಡೆದ ಬೀದಿ ನಾಯಿ ದಾಳಿ, ಕಡಿತ ಪ್ರಕರಣದಲ್ಲಿ ಸೀತಪ್ಪ ಎಂಬುವರು ಮೃತಪಟ್ಟಿದ್ದಾರೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ವ್ಯಗ್ರ ಹಾಗೂ ಕಡಿಯುವುದನ್ನೇ ಅಭ್ಯಾಸ ಮಾಡಿಕೊಂಡ ನಾಯಿಗಳನ್ನು ಬಿಬಿಎಂಪಿ ಪಶುಸಂಗೋಪನೆ ವಿಭಾಗದಿಂದ ಹಿಡಿದು, ನಿಗಾ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. ಆದರೂ, ನಾಗರಿಕರು ನೆಮ್ಮದಿಯಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
‘ಕಗ್ಗದಾಸಪುರದ ನೇತ್ರಾವತಿ ಕಾಲೊನಿಯಲ್ಲಿ ನಾಲ್ಕು ನಾಯಿಗಳು ತುಂಬಾ ಕ್ರೂರಿಯಾಗಿದ್ದು, ಈ ವರ್ಷದ ಜನವರಿಯಿಂದ ಈವರೆಗೆ ಸುಮಾರು 40 ಜನರಿಗೆ ಕಡಿದಿವೆ. ಕೆಲವು ಪ್ರಕರಣಗಳು ಅರಿವಿಗೆ ಬಂದಿಲ್ಲ’ ಎಂದು ನೇತ್ರಾವತಿ ಕಾಲೊನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಲೋಕಾಯುಕ್ತರಿಗೂ ದೂರು ನೀಡಿದ್ದಾರೆ.
‘ನಾಗರಿಕರನ್ನು ಕಚ್ಚುವ ಬೀದಿ ನಾಯಿಗಳನ್ನು ಹಿಡಿದೊಯ್ಯುವ ಬಿಬಿಎಂಪಿಯವರು ಒಂದಷ್ಟು ದಿನವಾದ ಮೇಲೆ ಅದೇ ಸ್ಥಳಕ್ಕೆ ಬಂದು ಬಿಡುತ್ತಾರೆ. ಆ ನಾಯಿ ಮತ್ತೆ ಬೇರೆಯವರಿಗೆ ಕಚ್ಚುತ್ತದೆ’ ಎಂಬುದು ನಾಗರಿಕರ ಆರೋಪ.
‘ವ್ಯಗ್ರ ಅಥವಾ ಕಚ್ಚಿದ ಬೀದಿ ನಾಯಿಗಳನ್ನು ಹಿಡಿದು, ನಿಗಾ ಕೇಂದ್ರದಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳು ಸಹಜ ಸ್ಥಿತಿಗೆ ಬಂದ ನಂತರ ಆ ನಾಯಿಗಳನ್ನು ಅವುಗಳಿದ್ದ ಸ್ಥಳಕ್ಕೇ ಬಿಡಬೇಕು, ಇದು ನಿಯಮ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.
‘ಬೀದಿ ನಾಯಿಗಳು ಕಚ್ಚಲು ಇಂತಹದ್ದೇ ನಿರ್ದಿಷ್ಟ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ವ್ಯಗ್ರ ಬೀದಿ ನಾಯಿಗಳು ಯಾವ ಕಾರಣವಿಲ್ಲದಿದ್ದರೂ ಕಚ್ಚುತ್ತವೆ. ಲೈಂಗಿಕಾಸಕ್ತಿಯ ಸಮಯವೂ ಕಚ್ಚಾಟದ ಕಾರಣಗಳಲ್ಲಿ ಒಂದು. ಆಹಾರ ಸಿಗದಿರುವುದು, ಹೆಚ್ಚಿನ ಆಹಾರ ಸಿಗುವುದು, ಮಾಂಸಕ್ಕಾಗಿ ಪರಸ್ಪರ ಕಿತ್ತಾಟದಲ್ಲಿ ಜನರ ಮೇಲೆರಗುವುದೂ ಬೀದಿ ನಾಯಿಗಳ ಕಚ್ಚಾಟಕ್ಕೆ ಕಾರಣಗಳಾಗಿವೆ’ ಎಂದು ಮಾಹಿತಿ ನೀಡಿದರು.
ರಸ್ತೆ ಬೀದಿಯಲ್ಲಿ ಹತ್ತಾರು ಸಂಖ್ಯೆಯಲ್ಲಿ ಬೀದಿ ನಾಯಿಗಳು ನಿತ್ಯವೂ ಅಡ್ಡಾಡುತ್ತಿರುತ್ತವೆ ಬೊಗಳುತ್ತಿರುತ್ತವೆ. ಅವುಗಳನ್ನು ಹಿಡಿಯಲು ಬಿಬಿಎಂಪಿ ವಾಹನ ಬಂದ ಸಂದರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಬೀದಿ ನಾಯಿಗಳನ್ನು ಹಿಡಿಯಲು ಸಿಬ್ಬಂದಿ ಹರಸಾಹಸ ಪಡಬೇಕಾಗಿದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಬಿಬಿಎಂಪಿ ಹೊಸ ಯೋಜನೆ ಜಾರಿಗೊಳಿಸಿದೆ ಅದುವೇ ‘ಟ್ರ್ಯಾಪ್ ಕೇಜ್’.
‘ನಗರದಲ್ಲಿ ಹಲವರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಅವರು ಬಂದಾಗ ನಾಯಿಗಳೆಲ್ಲ ಅವರ ಹಿಂದೆ ಅವರು ಆಹಾರ ಹಾಕುವ ಸ್ಥಳಕ್ಕೆ ಬರುತ್ತವೆ. ಹೀಗಾಗಿ ಅಂತಹವರನ್ನು ಮನವಿ ಮಾಡಿಕೊಂಡಿದ್ದು ಬಿಬಿಎಂಪಿ ಇರಿಸುವ ‘ಟ್ರ್ಯಾಪ್ ಕೇಜ್’ನಲ್ಲಿ ಆಹಾರ ಹಾಕುವಂತೆ ಕೇಳಿಕೊಳ್ಳಲಾಗಿದೆ. 10 x 15 ಅಡಿಯ ಬೋನಿನಲ್ಲಿ ಆಹಾರ ಸೇವಿಸಲು ಬರುವ ನಾಯಿಗಳನ್ನು ಹಿಡಿದು ಅವುಗಳಿಗೆ ಅಗತ್ಯವಾದ ಚುಚ್ಚುಮದ್ದು ನೀಡಲಾಗುತ್ತದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಾಗಿರದಿದ್ದರೆ ಅದನ್ನು ಮಾಡಿದ ನಂತರ ಆ ಸ್ಥಳಗಳಲ್ಲೇ ಬೀದಿ ನಾಯಿಗಳನ್ನು ಬಿಡಲಾಗುತ್ತಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕ ಚಂದ್ರಯ್ಯ ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.