ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆನಂದಿನಿ ಬಡಾವಣೆಯ ಸರಸ್ವತಿಪುರದಲ್ಲಿ ನಡೆದಿದೆ.
ಗಣೇಶ ಬ್ಲಾಕ್ ನಿವಾಸಿ ಉಮಾಮಹೇಶ್ವರ್ (20) ಕೊಲೆಯಾದ ವಿದ್ಯಾರ್ಥಿ.ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉಮಾಮಹೇಶ್ವರ್ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಈತನ ತಂದೆ ಗಾರೆ ಕೆಲಸಗಾರ. ತಾಯಿ ಗೃಹಿಣಿ.
ಇತ್ತೀಚೆಗೆ ಕ್ರಿಕೆಟ್ ಆಡುವ ವೇಳೆ ಉಮಾಮಹೇಶ್ವರ್ ತನ್ನ ಸ್ನೇಹಿತನ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ
ಕೊಂಡಿದ್ದ. ಜಗಳದ ವೇಳೆ ಉಮಾಮಹೇಶ್ವರ್ ಸ್ನೇಹಿತನಿಗೆ ಕಪಾಳ ಮೋಕ್ಷ ಮಾಡಿದ್ದ. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಅಭ್ಯರ್ಥಿ ಪ್ರಚಾರದವೇಳೆ ಇದೇ ವಿಚಾರಕ್ಕೆ ಉಮಾಮಹೇಶ್ವರ್ ಮತ್ತು ಸ್ನೇಹಿತರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಆನಂತರ ಹಲ್ಲೆಗೊಳಗಾಗಿದ್ದ ಸ್ನೇಹಿತ ಉಮಾಮಹೇಶ್ವರ್ ಹತ್ಯೆಗೆ ಸಂಚು ರೂಪಿಸಿದ್ದ.
ಬುಧವಾರ ಸಂಜೆ 7.30 ರ ಸುಮಾರಿಗೆ ಆರೋಪಿಗಳು ಉಮಾಮಹೇಶ್ವರ್ನ ಗಣೇಶ್ ಬ್ಲಾಕ್ನ ಮನೆ ಬಳಿ ಬಂದಿದ್ದು, ಹೊರಗೆ ಇದ್ದ ಯುವಕನಿಗೆ ಏಕಾಏಕಿ ಇರಿದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಯುವಕನನ್ನು ಕುಟುಂಬದ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಕಸದೇ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.
ಕೊಲೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು. ನಂದಿನಿ ಲೇಔಟ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.