ಬೆಂಗಳೂರು: ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ನಿಗದಿಪಡಿಸಿದ್ದ ಷರತ್ತುಗಳ ಪ್ರಕಾರ ನಿಲ್ದಾಣಗಳ ಸಂಖ್ಯೆ ಮತ್ತು ರೈಲು ಮಾರ್ಗದ ಉದ್ದವನ್ನು ಕಡಿಮೆ ಮಾಡಿ ಕಾರ್ಯಸಾಧ್ಯತಾ ವರದಿ (ಡಿಪಿಆರ್) ಕಳುಹಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಪರಿಷ್ಕೃತ ಯೋಜನೆ ಪ್ರಕಾರ, 62 ನಿಲ್ದಾಣಗಳನ್ನು ಒಳಗೊಂಡ 148 ಕಿ.ಮೀ ಉದ್ದಕ್ಕೆ ಉಪನಗರ ರೈಲು ಯೋಜನೆ ಸೀಮಿತಗೊಳ್ಳಲಿದೆ. ಈ ಹಿಂದಿನ ಯೋಜನೆಗಿಂತ 12.33 ಕಿ.ಮೀ ಕಡಿಮೆಯಾಗಲಿದೆ.
ಈ ಮೊದಲು86 ನಿಲ್ದಾಣಗಳನ್ನು ಒಳಗೊಂಡ161 ಕಿ.ಮೀ ಉದ್ದದ ಮಾರ್ಗಕ್ಕೆ ಯೋಜನೆ ರೂಪಿಸಲಾಗಿತ್ತು. ₹19,500 ಕೋಟಿ ಇದ್ದ ಯೋಜನಾ ಮೊತ್ತದಲ್ಲಿ ಈಗ ₹5,000 ಕೋಟಿ ಕಡಿಮೆಯಾಗುವ ಸಾಧ್ಯತೆ ಇದೆ.
‘ಪ್ರಧಾನಿ ಕಚೇರಿಯ ನಿರ್ದೇಶನದಂತೆ, ನಗರದೊಳಗೆ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.ನಗರದೊಳಗಿನ ದಟ್ಟಣೆ ಪ್ರದೇಶಗಳಿಗಿಂತ ಹೊರಗಿನಿಂದ ಪ್ರಯಾಣಿಸುವವರಿಗೆ ಅನುಕೂಲ ಕಲ್ಪಿಸಲು ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ’ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.
ಈ ಹಿಂದಿನ ಪ್ರಸ್ತಾವನೆಯಲ್ಲಿ ಇದ್ದ ಚಿಕ್ಕಬಾಣಾವರ– ನೆಲಮಂಗಲ ನಡುವಿನ ಮಾರ್ಗವನ್ನು ಕೈಬಿಡಲಾಗಿದೆ. ಕಂಟೋನ್ಮೆಂಟ್-ವೈಟ್ಫೀಲ್ಡ್ ಮಾರ್ಗದಲ್ಲಿ ನಾಲ್ಕುಪಥ ಮತ್ತುಸ್ಥಳೀಯ ರೈಲುಗಳನ್ನು ಓಡಿಸಲು ಹೆಚ್ಚುವರಿ ಎರಡು ಮಾರ್ಗಗಳನ್ನೂ ನಿರ್ಮಿಸಲಾಗುತ್ತದೆ. ಕೆಂಗೇರಿ ಮಾರ್ಗವನ್ನು ಕಂಟೋನ್ಮೆಂಟ್ನಲ್ಲಿ ಕೊನೆಗೊಳಿಸಲಾಗಿದ್ದು, ಹೀಲಳಿಗೆ-ದೇವನಹಳ್ಳಿ ಕಾರಿಡಾರ್ ಅನ್ನು ರಾಜಾನುಕುಂಟೆಯನ್ನು ಸಂಪರ್ಕಿಸುವಂತೆ ವಿನ್ಯಾಸ ಮಾಡಲಾಗಿದೆ.
ಪರಿಷ್ಕೃತ ಡಿಪಿಆರ್ನಲ್ಲಿವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಒಳಗೊಂಡಿಲ್ಲ. ಆದರೆ, ದೇವನಹಳ್ಳಿಯಿಂದ ಕಡಿಮೆ ಖರ್ಚಿನಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದೆ.ನಾಲ್ಕು ತಿಂಗಳಲ್ಲಿ ಪರಿಷ್ಕೃತ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದಷ್ಟು ಬೇಗ ರೈಲ್ವೆ ಮಂಡಳಿಗೆ ಕಳುಹಿಸಿ ಅನುಮೋದನೆ ಪಡೆಯಬೇಕು ಎಂದು ಉಪನಗರ ಸಾರಿಗೆ ಹೋರಾಟಗಾರರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.