ADVERTISEMENT

ವಿಧಾನಪರಿಷತ್ ಸದಸ್ಯನ ವಿರುದ್ಧ ಎಫ್ಐಆರ್

ಶಾಸಕನ ಅಡ್ಡಗಟ್ಟಿ, ಹಲ್ಲೆ ನಡೆಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:05 IST
Last Updated 11 ಆಗಸ್ಟ್ 2019, 20:05 IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಬಂದಿದ್ದ ಡಾ. ಕೆ. ಸುಧಾಕರ್ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಆರೋಪದಡಿ ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಜುಲೈ 10ರ ಈ ಘಟನೆ ಸಂಬಂಧ ಎನ್‌.ಪಿ. ಅಮೃತೇಶ್ ಎಂಬುವರು ದೂರು ನೀಡಿದ್ದರು. ಪ‍್ರಾಥಮಿಕ ತನಿಖೆ ನಡೆಸಿ ಸುಧಾಕರ್ ಅವರ ಹೇಳಿಕೆ ಪಡೆದು ಶನಿವಾರವಷ್ಟೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು. ಚಿಕ್ಕಬಳ್ಳಾಪುರ ಶಾಸಕ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆಗಿದ್ದ ಸುಧಾಕರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಜುಲೈ 10ರಂದು ವಿಧಾನಸೌಧಕ್ಕೆ ಬಂದಿದ್ದರು.

‘ಅಂದಿನ ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಲು ಹೊರಟಿದ್ದಾಗ ಆರೋಪಿ ನಜೀರ್ ಅಹ್ಮದ್ ಹಾಗೂ ಇತರರು ವಿಧಾನಸೌಧದ ಲಿಫ್ಟ್ ಬಳಿಯೇ ಸುಧಾಕರ್ ಅವರನ್ನು ಎಳೆದಾಡಿ ಹಲ್ಲೆ ಮಾಡಿದ್ದರು. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.