ಕಬ್ಬು ಕಟಾವು (ಸಾಂದರ್ಭಿಕ ಚಿತ್ರ)
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕಬ್ಬಿಗೆ ದರ ನಿಗದಿ ಮಾಡುವ ಬಗ್ಗೆ ರಾಜ್ಯ ಸರ್ಕಾರವು ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಇದ್ದರೆ ಕಬ್ಬು ಬೆಳೆಗಾರರ ಹೋರಾಟವನ್ನು ರಾಜ್ಯ ವ್ಯಾಪಿ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ ಕರ್ನಾಟಕ ಎಚ್ಚರಿಕೆ ನೀಡಿದೆ.
ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳಾದ ಎಚ್.ಆರ್. ಬಸವರಾಜಪ್ಪ, ಬಡಗಲಪುರ ನಾಗೇಂದ್ರ, ಸಿದಗೌಡ ಮೋದಗಿ, ನೂರ್ ಶ್ರೀಧರ್, ಟಿ.ಯಶವಂತ, ಭಗವಾನ್ ರೆಡ್ಡಿ, ಡಿ.ಎಚ್. ಪೂಜಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಬೆಳಗಾವಿಗೆ ಬರುತ್ತಿದ್ದಾರೆ. ಬೆಳಗಾವಿಯ ಕಬ್ಬು ಬೆಳೆಯುವ ರೈತರ ಹಕ್ಕೊತ್ತಾಯದಂತೆ ಪ್ರತಿ ಟನ್ನಿಗೆ ₹3,500 ನಿಗದಿಪಡಿಸಬೇಕು. ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಸಲಹಾ ಬೆಲೆ ನೀತಿ ಉಳಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಎಫ್ಆರ್ಪಿ ಜೊತೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕರ್ನಾಟಕದಲ್ಲೂ ರಾಜ್ಯದ ರೈತರ ಹಿತಕಾಯಲು ರಾಜ್ಯ ಬೆಲೆ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಮಸ್ಯೆ ಉಲ್ಬಣಗೊಳ್ಳಲು ಕೇಂದ್ರ ಸರ್ಕಾರ ನೇರ ಹೊಣೆ. ಎಥೆನಾಲ್ ಉತ್ಪಾದನೆಯ ಪ್ರಮಾಣ ನಿಗದಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಗುಜರಾತಿನಲ್ಲಿ ಕಾರ್ಖಾನೆಗಳಿಗೆ ಶೇ 70ರಷ್ಟು ಎಥೆನಾಲ್ ಉತ್ಪಾದನೆ ಅವಕಾಶ ಕೊಟ್ಟಿದ್ದರೆ, ರಾಜ್ಯದ ಕಾರ್ಖಾನೆಗಳಿಗೆ ಶೇ 17ಕ್ಕೆ ನಿರ್ಬಂಧಿಸಲಾಗಿದೆ. ಈ ಅನ್ಯಾಯವನ್ನು ಸರಿಪಡಿಸಿ ಶೇ 30ರಷ್ಟು ಎಥೆನಾಲ್ ಉತ್ಪಾದನೆಗೆ ಅವಕಾಶ ಕೊಡಬೇಕು. ಕೇಂದ್ರ ಸರ್ಕಾರ ಎಫ್ಆರ್ಸಿ ದರ ನಿಗದಿಯನ್ನು ಮರುಪರಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.