ADVERTISEMENT

‘ನಿಖಿಲ್‌ಗಿಂತ ಸುಮಲತಾ ಉತ್ತಮ ಅಭ್ಯರ್ಥಿ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 20:29 IST
Last Updated 11 ಏಪ್ರಿಲ್ 2019, 20:29 IST
   

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ‍ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಉತ್ತಮ ಆಯ್ಕೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅಭಿಪ್ರಾಯಪಟ್ಟರು.

ಮಾಧ್ಯಮ ಸಂವಾದದಲ್ಲಿ ಗುರುವಾರ ಮಾತನಾಡಿದ ಅವರು, ‘ವಿಚಾರವಂತಿಕೆ, ಅನುಭವ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಸುಮಲತಾ ಉತ್ತಮ ಅಭ್ಯರ್ಥಿ. ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ತಪ್ಪಲ್ಲ’ ಎಂದರು.

‘ವೈಯಕ್ತಿಕವಾಗಿ ನರೇಂದ್ರ ಮೋದಿ ಮೇಲೆ ನನಗೆ ದ್ವೇಷವಿಲ್ಲ. ಆದರೆ ಅವರ ವಿಚಾರಗಳು ಸರಿಯಿಲ್ಲ. ಹೀಗಾಗಿ ಅವರು ಮತ್ತೆ ಪ್ರಧಾನಿ ಆಗುವುದು ನನಗೆ ಇಷ್ಟವಿಲ್ಲ. ಹಿಂದೂ ಧರ್ಮದ ವಿರೋಧಿ ನಾನಲ್ಲ. ಧರ್ಮ ಆಧರಿತ ರಾಜಕಾರಣವನ್ನು ನಾನು ಮಾಡುವುದೂ ಇಲ್ಲ’ ಎಂದು ಹೇಳಿದರು.

ADVERTISEMENT

‘ನನ್ನ ಸ್ಪರ್ಧೆ ಬಿಜೆಪಿಗೆ ಲಾಭ ಎಂಬ ಲೆಕ್ಕಾಚಾರವನ್ನು ಒಪ್ಪುವುದಿಲ್ಲ. ಪರ್ಯಾಯ ರಾಜಕಾರಣ ಬಯಸಿ ಸ್ಪರ್ಧಿಸಿದ್ದೇನೆ. ‌ಹಣ ಕೊಟ್ಟು ಮತ ಪಡೆಯುವ ಉದ್ದೇಶ ನನಗಿಲ್ಲ’ ಎಂದರು.

‘ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಗೆದ್ದರೆ ಕೆಲಸ ಮಾಡುತ್ತೇನೆ, ಗೆಲ್ಲದೇ ಇದ್ದರೂ ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ. ನನಗೀಗ 55 ವರ್ಷ, ಇನ್ನೂ 15 ವರ್ಷ ರಾಜಕೀಯದಲ್ಲಿ ಇರುತ್ತೇನೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದಿಲ್ಲ. ಈಗ ಪ್ರಬುದ್ಧನಾಗಿದ್ದೇನೆ. ಬಾಲಿಶವಾದ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ. ಉತ್ತಮ ಅವಕಾಶಗಳು ಬಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.