ಸಾಂದರ್ಭಿಕ ಚಿತ್ರ
(ಎಐ ಚಿತ್ರ)
ಬೆಂಗಳೂರು: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ–ಡಾಕ್) ವತಿಯಿಂದ ಡಿ.9ರಿಂದ 13ರವರಗೆ ಇಲ್ಲಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೂಪರ್ ಕಂಪ್ಯೂಟಿಂಗ್ ಇಂಡಿಯಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಸಮಾವೇಶದ ಪ್ರಯುಕ್ತ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಚಾಲನೆ ನೀಡಿದರು.
‘ಸೂಪರ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಭಾರತವು ಪ್ರಬಲವಾಗುತ್ತಿದ್ದು, ತನ್ನದೇ ಆದ ಸೂಪರ್ಕಂಪ್ಯೂಟರ್ಗಳನ್ನು ಅಭಿವೃದ್ಧಿಪಡಿಸುತ್ತಿದೆ. ರಾಷ್ಟ್ರೀಯ ಕಂಪ್ಯೂಟಿಂಗ್ ಮಿಷನ್ ಅಡಿ ಸ್ವದೇಶಿಯವಾಗಿ ಸೂಪರ್ಕಂಪ್ಯೂಟರ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಮ ರುದ್ರ ಸೂಪರ್ ಕಂಪ್ಯೂಟರ್ಗಳು ಮಹತ್ವದ ವೈಜ್ಞಾನಿಕ ಸಂಶೋಧನೆಗಳಿಗೆ ನೆರವಾಗುತ್ತಿವೆ. ವಿಜ್ಞಾನ, ಆರೋಗ್ಯ, ಬಾಹ್ಯಾಕಾಶ ಸಂಶೋಧನೆಯಂತಹ ಅನೇಕ ಕ್ಷೇತ್ರಗಳಲ್ಲಿ ಇವು ಸಹಕಾರಿಯಾಗಲಿವೆ’ ಎಂದು ಹೇಳಿದರು.
‘ದೇಶೀಯ ಸೂಪರ್ ಕಂಪ್ಯೂಟರ್ಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿಸುವ ಗುರಿಯನ್ನು ಹೊಂದಿವೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ದತ್ತಾಂಶ ವಿಶ್ಲೇಷಣೆಗೆ ಸಹಕಾರಿಯಾಗಿವೆ’ ಎಂದರು.
ಸಿ–ಡಾಕ್ನ ಮಹಾನಿರ್ದೇಶಕ ಮಗೇಶ್ ಎಥಿರಾಜನ್, ‘ಮುಂಬರುವ ಸಮಾವೇಶವು ಈ ಕ್ಷೇತ್ರದ ತಜ್ಞರು, ಸಂಶೋಧಕರು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಡಿ ತರಲಿದ್ದು, ಹೊಸ ಆವಿಷ್ಕಾರ ಮತ್ತು ಆಲೋಚನೆಗಳಿಗೆ ಸಹಕಾರಿಯಾಗಲಿದೆ. 200ಕ್ಕೂ ಅಧಿಕ ಭಾಷಣಕಾರರು ಪಾಲ್ಗೊಳ್ಳಲಿದ್ದು, ಐದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 15ಕ್ಕೂ ಅಧಿಕ ದೇಶಗಳಿಂದ 500ಕ್ಕೂ ಅಧಿಕ ಸಂಶೋಧಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಸಿ–ಡಾಕ್ ಜಂಟಿ ಕಾರ್ಯದರ್ಶಿ ರಾಜೇಶ್ ಸಿಂಗ್, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಸುದರ್ಶನ್, ಸಂಶೋಧಕ ಮೊಹ್ಮದ್ ಮಿಸ್ಬಾಹುದ್ದೀನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.