ADVERTISEMENT

ಸ್ವಚ್ಛ ಸರ್ವೇಕ್ಷಣ ಅಭಿಯಾನದ ಜಾಗೃತಿಗೆ ಸೈಕ್ಲಥಾನ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 19:01 IST
Last Updated 13 ಫೆಬ್ರುವರಿ 2021, 19:01 IST
ಗೌರವ ಗುಪ್ತ, ಡಿ. ರಂದೀಪ್, ಜೆ.ಮಂಜುನಾಥ್‌, ಸರ್ಫರಾಜ್‌ ಖಾನ್‌ ಹಾಗೂ ಇತರ ಅಧಿಕಾರಿಗಳು ಸೈಕಲ್‌ನಲ್ಲಿ ಸಾಗಿದರು
ಗೌರವ ಗುಪ್ತ, ಡಿ. ರಂದೀಪ್, ಜೆ.ಮಂಜುನಾಥ್‌, ಸರ್ಫರಾಜ್‌ ಖಾನ್‌ ಹಾಗೂ ಇತರ ಅಧಿಕಾರಿಗಳು ಸೈಕಲ್‌ನಲ್ಲಿ ಸಾಗಿದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 'ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021'ರ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶನಿವಾರ ‘ಸೈಕ್ಲಥಾನ್’ ಏರ್ಪಡಿಸಲಾಯಿತು.

ಬಿಬಿಎಂಪಿ ಕೇಂದ್ರ ಕಚೇರಿ ಯಿಂದ ಹೊರಟ ಸೈಕಲ್ ಸವಾರರು ಕಬ್ಬನ್ ಉದ್ಯಾನ, ಕಂಟ್ರಿ ಕ್ಲಬ್, ವಿಧಾನಸೌಧ, ಕಾಫಿ ಬೋರ್ಡ್, ಚಿನ್ನಸ್ವಾಮಿ ಕ್ರಿಡಾಂಗಣ, ಯುಬಿ ಸಿಟಿ, ಮಲ್ಯ ಆಸ್ಪತ್ರೆ ಮಾರ್ಗಗಳ ಮೂಲಕ ಸಾಗಿ ಮತ್ತೆ ಪಾಲಿಕೆ ಕೇಂದ್ರ ಕಚೇರಿಗೆ ಮರಳಿದರು.

‘ಸೈಕ್ಲಥಾನ್’ ಉದ್ಘಾಟಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ, 'ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ನಗರಕ್ಕೆ ಉತ್ತಮ ಅಂಕ ಬರಲು ಸಹಕರಿಸಬೇಕು' ಎಂದು ಕೋರಿದರು.

ADVERTISEMENT

'ಪಾಲಿಕೆ, ಸ್ಮಾರ್ಟ್ ಸಿಟಿ ಯೋಜನೆ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ವತಿಯಿಂದ ನಗರದಲ್ಲಿ‌ ಸೈಕಲ್ ಪಥಗಳನ್ನು ಹಾಗೂ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೋಟಾರುರಹಿತ ಸಾರಿಗೆ ವ್ಯವಸ್ಥೆ ಬಲಪಡಿಸಲಾಗುತ್ತಿದೆ’ ಎಂದರು.

ವಿಶೇಷ ಆಯುಕ್ತ(ಕಸ ವಿಲೇವಾರಿ) ಡಿ.ರಂದೀಪ್,'ನಗರವನ್ನು ಸ್ವಚ್ಛ ಸುಂದರವಾಗಿ ಮಾಡಲು ಪಾಲಿಕೆ ಕಸ ವಿಲೇವಾರಿ ಪದ್ದತಿಯಲ್ಲಿ‌ ಅನೇಕ ಬದಲಾವಣೆಗಳನ್ನು ಜಾರಿಗೆ ತಂದಿದೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಾಗರಿಕರು ಉತ್ತಮ ಪ್ರತಿಕ್ರಿಯೆ ನೀಡಿದರೆ ನಗರಕ್ಕೆ ಉತ್ತಮ ಅಂಕ ಸಿಗಲಿದೆ. ರಂಗೋಲಿ ಹಬ್ಬ, ಸ್ವಚ್ಛತಾ ಆಂದೋಲನ, ಬೀದಿ ನಾಟಕಗಳ ಮೂಲಕ ಈ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ' ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್, ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್, ಮುಖ್ಯ ಎಂಜಿನಿಯರ್ (ಕಸ ವಿಲೇವಾರಿ) ವಿಶ್ವನಾಥ್ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.