ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳಿಗಾಗಿ ಬ್ಯಾಟರಿ ಬದಲಾಯಿಸುವ ಕೇಂದ್ರಗಳನ್ನು ಎಲ್ಲ ಮೆಟ್ರೊ ರೈಲು ನಿಲ್ದಾಣಗಳ ಬಳಿ ನಿರ್ಮಿಸಲು ಬಿಎಂಆರ್ಸಿಎಲ್ ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಐದು ನಿಲ್ದಾಣಗಳಲ್ಲಿ ಈ ಕೇಂದ್ರಕ್ಕೆ ಚಾಲನೆ ನೀಡಿದೆ.
ಕೆ.ಆರ್. ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಬನಶಂಕರಿ, ಟ್ರಿನಿಟಿ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ಈ ಸೇವೆಯನ್ನು ಆರಂಭಿಸಿದೆ. ಹೊಂಡಾ ಕಂಪನಿ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಬನಶಂಕರಿ ನಿಲ್ದಾಣದಲ್ಲಿ ತೆರೆದಿರುವ ಕೇಂದ್ರವನ್ನು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹಾಗೂ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಅಧ್ಯಕ್ಷ ಕಿಯೋಶಿ ಇಟೊ ಅವರು ಬುಧವಾರ ಉದ್ಘಾಟಿಸಿದರು.
‘ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಈ ಬ್ಯಾಟರಿ ಬಳಕೆ ಮಾಡಿಕೊಳ್ಳಬಹುದಾಗಿದೆ. ವಿದ್ಯುತ್ ಚಾಲಿತ ವಾಹನಗಳ ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಈ ಸೇವೆ ಆರಂಭಿಸಲಾಗಿದೆ. ಮೆಟ್ರೊ ಫೀಡರ್ ಸೇವೆಗೆ ಅನುಕೂಲ ಆಗಲಿದೆ’ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.